Friday, July 29, 2011

ಮಂತ್ರಯೋಗ ಮತ್ತು ಮನಃಶುದ್ಧಿ

ದೇಹಕ್ಕೆ ಯಾಂತ್ರಿಕ ಸ್ನಾನ
ಮನಕ್ಕೆ ಮಾಂತ್ರಿಕ ಸ್ನಾನ
ಆತ್ಮಕ್ಕೆ ಆಂತರಂಗಿಕ ಸ್ನಾನ.

ಸಾಮಾನ್ಯವಾಗಿ ಸ್ನಾನ ಮಾಡುವಾಗ ಭಕ್ತರು ಮಂತ್ರಗಳು ಸ್ತೋತ್ರಗಳನ್ನು ಪಠಿಸುತ್ತಾರೆ. ದೇಹದ ಮೇಲೆ ಯಾಂತ್ರಿಕವಾಗಿ ನೀರು ಬಿಳುತ್ತಿರುತ್ತದೆ. ಮೈಕೈ ಉಜ್ಜಿಕೊಳ್ಳುವುದೂ ಅಷ್ಟೇ ಯಾಂತ್ರಿಕವಾಗಿ ನಡೆಯುತ್ತದೆ. ಬಾಯಲ್ಲಿ ಮಂತ್ರೋಚ್ಚಾರಣೆಯೂ ಎಷ್ಟೋ ಸಲ ಯಾಂತ್ರಿಕವಾಗಿಯೇ ಆಗಿರುತ್ತದೆ. ಹಾಗೆ ಸ್ನಾನ ಆನ್ಹೀಕ ಸಂದರ್ಭದಲ್ಲಿ ಪಠಿಸುವುದರಿಂದ ಒಳಿತಾಗುತ್ತದೆಂಬುದು ನಂಬಿಕೆಯಷ್ಟೇ. ಯಾವ ಸಂದರ್ಭದಲ್ಲಿ  ಹೇಗೆ ಪಠಿಸಿದರೆ ಮಂತ್ರದಿಂದ ಆಗುವ ಫಲವೇನು ಎಂಬುದರ ಪರಿವೆಯೂ  ಎಷ್ಟೋ ವೇಳೆ ಇರುವುದಿಲ್ಲ.

"ಮನನಾತ್ ತ್ರಾಯತೇ ಇತಿ ಮಂತ್ರಃ"
ಮನಸ್ಸಿನ ಮೇರೆಯನ್ನು ಮೀರುವುದಾದಾಗಲೆ ಮಂತ್ರ ಸಿದ್ಧಿಸಿಯಾದಂತೆ.
ವೇದ ಶಾಸ್ತ್ರಗಳು ಸ್ತೋತ್ರ ಪಠಣೆಗಳಿರುವುದಾದರೂ ಅದಕ್ಕಾಗಿಯೆ.

ಗಾಯಿತ್ರಿ ಮಂತ್ರ ವೇದ ಮಂತ್ರವಾಗಿದೆ. ಗಾಯತ್ರಿ ವೇದ ಜನನಿ ಎನ್ನುತ್ತಾರೆ.
ಓಂ ಭೂರ್ಭುವಸ್ಸುವಃ
ತತ್ಸವಿತುರ್ವರೇಣ್ಯಂ|
ಭರ್ಗೋದೇವಸ್ಯ ಧೀಮಹಿ
ಧಿಯೋಯೋನಃ ಪ್ರಚೋದಯಾತ್||
ಅರ್ಥ:- ಎಲ್ಲ ಲೋಕಗಳಲ್ಲಿಯು ತೇಜೋ ರೋಪದಿಂದ ಪ್ರಕಾಶಿಸುವ ಭಗವಂತನು ನಮಗೆ ಬುದ್ಧಿ ಶಕ್ತಿಯನ್ನು ಕೊಟ್ಟು ಅವನ್ನು ಪ್ರಚೋದಿಸಲಿ.
ಗಾಯತ್ರಿ ಮಂತ್ರ ಹೇಳುವ ಮೊದಲು,
ಪರಬ್ರಹ್ಮ ಋಷಿಃ, ಪರಮಾತ್ಮಾ ದೇವತಾ,
ದೇವಿ ಗಾಯತ್ರಿ ಛಂದಃ,
ಪ್ರಾಣಾಯಾಮೇ ವಿಯೋಗಃ
ಎಂದು ಹೇಳಿ ಸಂಕಲ್ಪ ಮಾಡಿ ಜಪ ಧ್ಯಾನ ಮಾಡುವುದು ವೈದಿಕ ಪದ್ಧತಿ.

ಮಂತ್ರಗಳಲ್ಲಿ ಮೂರು ವಿಧ-ಬೀಜ ಮಂತ್ರ, ಮೂಲ ಮಂತ್ರ, ಮಾಲಾ ಮಂತ್ರ
ಋಷಿಗಳೇ ಮಂತ್ರದ ದೃಷ್ಟಾರರು. ಒಂದೊಂದು ಮಂತ್ರಕ್ಕೆ ಒಬ್ಬೊಬ್ಬ ದೃಷ್ಟಾರರು.
ಸಾಧಕನು ಋಷಿಯನ್ನು ಸ್ಮರಿಸಿದ ಬಳಿಕ ಛಂದಸ್ಸನ್ನೂ ಹೇಳುತ್ತಾನೆ. ಬಳಿಕ ಅಂಗನ್ಯಾಸ ಕರನ್ಯಾಸ ಮಾಡಿಕೊಳ್ಳುತ್ತಾನೆ.

ಮಂತ್ರ ಪಠಣವೆಂಬುದು ಮನೋನಿಯಂತ್ರಣಕ್ಕಾಗಿ,
ನಿಯಂತ್ರಣದಲ್ಲಿ ನಿಶ್ಚಲತತ್ವಕ್ಕಾಗಿ,
ನಿಶ್ಚಲತೆಯಲ್ಲಿ ನಿರ್ವಿಕಲ್ಪ ಸ್ಥಿತಿಗಾಗಿ.
ಅಂತಹ ಸ್ಥಿತಿ-ಸಿದ್ಧೀ ಸಾಧನೆಯಲ್ಲಿ ಕಂಡುಕೊಳ್ಳುವ ಮನಃ ಶುದ್ಧಿಗಾಗಿ.

ಮ:ನ ಶುದ್ಧಿ ಇಲ್ಲದವಗೆ ಮಂತ್ರದ ಫಲವೇನು?
ತನು ಶುದ್ಧಿ ಇಲ್ಲದವಗೆ ತೀರ್ಥದ ಫಲವೇನು?
ಭೋಗದಲ್ಲಿ ತನು ಮನಗಳೆರಡರ ನೈರ್ಮಲ್ಯ ಅಗತ್ಯ.
ಸದಾಚಾರವೇ ಸ್ನಾನ
ಸದ್ಭಾವನೆಯಿಂದಲೇ ಧ್ಯಾನ.


ಮಣಿಮಂತ್ರ ತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ|
ಮನಗಾಣಿಸಲು ನಿನಗೆ ದೈವದದ್ಭುತವ?||
ಮನುಜರೊಳಗಾಗಾಗ ತೋರ್ಪ ಮಹನೀಯಗುಣ|
ವನುವಾದ ಬೊಮ್ಮನದು-ಮಂಕುತಿಮ್ಮ||
-ಎನ್ನುತ್ತಾರೆ ಡಿ.ವಿ.ಜಿ.

ಮೈತೊಳೆಯುವುದು ಯಾಂತ್ರಿಕವಾದರೇನು? 
ಮನತೊಳೆಯುವುದು ಮಾತ್ರ ಮಾಂತ್ರಿಕವಾಗಬೇಕು.
ಮಾನವೀಯ ಮೌಲ್ಯಗಳೆಲ್ಲವೂ ನಮಗೆ ಮೂಲ ಮಂತ್ರಗಳೇ ಆಗಬೇಕು. ತನುಮನಗಳ ದಂಡನೆ ಸತ್ಯನಿಷ್ಠೂರತೆಯಿಂದ ಕೂಡಿರಬೇಕು.  ಸಂಯಮ ನಿಯಮಗಳ ಸಾಧನೆ ನಿರಂತರವಾಗಿರಬೇಕು.
ಏನೆ ಆಗಲಿ, ಜೀವನ್ಮುಕ್ತಿಯ ಸಿದ್ಧಿ-ಸಂಕಲ್ಪಗಳೆ ಶ್ರೇಷ್ಠ.
ಯಾವಾಗಲೂ ವಿಚಾರದಿಂದ ವಿವಶನಾಗುವುದಕ್ಕಿಂತ ಆಚಾರದಿಂದ ವಿವೇಕಶಾಲಿಯಾಗುವುದು ಲೇಸು.

No comments: