Saturday, August 6, 2011

ಭಕ್ತಿಮಾರ್ಗ-ಜ್ಞಾನಮಾರ್ಗ

ಶಿವ-ಕೇಶವರ ಭಕ್ತಿಮಾರ್ಗ
ಶಿವಶ್ಚ ಹೃದಯಂ ವಿಷ್ಣುಃ
ವಿಷ್ಣೋಶ್ಚ ಹೃದಯಂ ಶಿವಃ
ಶಿವನ ಹೃದಯದಲ್ಲಿ ವಿಷ್ಣು ಇದ್ದಾನೆ. ವಿಷ್ಣುವಿನ ಹೃದಯದಲ್ಲಿ ಶಿವನಿದ್ದಾನೆ. ಅಂದಹಾಗೆ  ವಿಷ್ಣುವಿಲ್ಲದೇ ಶಿವನಿಲ್ಲ; ಶಿವನಿಲ್ಲದೇ ವಿಷ್ಣುವಿಲ್ಲ.
ಶಿವ ಕೇಶವ ಇಬ್ಬರಲ್ಲೂ ಭಕ್ತಿಮಾರ್ಗವಿದೆ. ಭಕ್ತಿಮಾರ್ಗದಲ್ಲಿ ಪರಬ್ರಹ್ಮನಿದ್ದಾನೆ.
ಭಕ್ತರ ಭವರೋಗ ನಿವಾರಣೆ ಮಾಡಲು ಶಿವ ಕೇಶವರ ಭಕ್ತಿಮಾರ್ಗವು ಅನನ್ಯ.
ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗ.
ತಸ್ಮಾದ್ ಸರ್ವಗತಂ ಬ್ರಹ್ಮ|
ನಿತ್ಯಂ ಯಜ್ಞೇ ಪ್ರತಿಷ್ಠಿತಂ||
ಬ್ರಹ್ಮನ ನಿತ್ಯ ಯಜ್ಞವಾದರೂ ಯಾವುದು?
ಜ್ಞಾನಯಜ್ಞವೇ ನಿತ್ಯ ಯಜ್ಞ. ಆ ಯಜ್ಞದಲ್ಲಿ ಬ್ರಹ್ಮನಿದ್ದಾನೆ.
ಬ್ರಹ್ಮನಿಗಿಂತಲೂ ಬ್ರಹ್ಮಜ್ಞಾನ ದೊಡ್ಡದು.
ಅಂತೆಯೇ ಬ್ರಹ್ಮ ತಾನು ಪೂಜೆಗೆ ಅರ್ಹನಲ್ಲವೆಂಬುದನ್ನು ಒಪ್ಪಿಕೊಂಡು, ದಾರ್ಶನಿಕತೆ ತೋರಿದ್ದಾನೆ. ಅವನು ಪೂಜಾರ್ಹನಾಗಬಾರದೆಂಬುದಕ್ಕೆ ಭೃಗಮಹರ್ಷಿಯ ಶಾಪವೊಂದು ನಿಮಿತ್ತ ಮಾತ್ರವಾಯಿತಷ್ಟೇ.
ನಾವು ಗಮನಿಸಿದಂತೇ ಎಲ್ಲ ಶುಭಕಾರ್ಯ ಕಲಾಪಗಳಲ್ಲಿ ಬ್ರಹ್ಮನಿದ್ದಾನೆ. ಆತನ ಬ್ರಹ್ಮತ್ವವಿದೆ; ವೇದಷೋಷಗಳಿವೆ. ಮಂಗಲಾಷ್ಟಕಗಳಿವೆ.

Friday, July 29, 2011

ಮಂತ್ರಯೋಗ ಮತ್ತು ಮನಃಶುದ್ಧಿ

ದೇಹಕ್ಕೆ ಯಾಂತ್ರಿಕ ಸ್ನಾನ
ಮನಕ್ಕೆ ಮಾಂತ್ರಿಕ ಸ್ನಾನ
ಆತ್ಮಕ್ಕೆ ಆಂತರಂಗಿಕ ಸ್ನಾನ.

ಸಾಮಾನ್ಯವಾಗಿ ಸ್ನಾನ ಮಾಡುವಾಗ ಭಕ್ತರು ಮಂತ್ರಗಳು ಸ್ತೋತ್ರಗಳನ್ನು ಪಠಿಸುತ್ತಾರೆ. ದೇಹದ ಮೇಲೆ ಯಾಂತ್ರಿಕವಾಗಿ ನೀರು ಬಿಳುತ್ತಿರುತ್ತದೆ. ಮೈಕೈ ಉಜ್ಜಿಕೊಳ್ಳುವುದೂ ಅಷ್ಟೇ ಯಾಂತ್ರಿಕವಾಗಿ ನಡೆಯುತ್ತದೆ. ಬಾಯಲ್ಲಿ ಮಂತ್ರೋಚ್ಚಾರಣೆಯೂ ಎಷ್ಟೋ ಸಲ ಯಾಂತ್ರಿಕವಾಗಿಯೇ ಆಗಿರುತ್ತದೆ. ಹಾಗೆ ಸ್ನಾನ ಆನ್ಹೀಕ ಸಂದರ್ಭದಲ್ಲಿ ಪಠಿಸುವುದರಿಂದ ಒಳಿತಾಗುತ್ತದೆಂಬುದು ನಂಬಿಕೆಯಷ್ಟೇ. ಯಾವ ಸಂದರ್ಭದಲ್ಲಿ  ಹೇಗೆ ಪಠಿಸಿದರೆ ಮಂತ್ರದಿಂದ ಆಗುವ ಫಲವೇನು ಎಂಬುದರ ಪರಿವೆಯೂ  ಎಷ್ಟೋ ವೇಳೆ ಇರುವುದಿಲ್ಲ.

"ಮನನಾತ್ ತ್ರಾಯತೇ ಇತಿ ಮಂತ್ರಃ"
ಮನಸ್ಸಿನ ಮೇರೆಯನ್ನು ಮೀರುವುದಾದಾಗಲೆ ಮಂತ್ರ ಸಿದ್ಧಿಸಿಯಾದಂತೆ.
ವೇದ ಶಾಸ್ತ್ರಗಳು ಸ್ತೋತ್ರ ಪಠಣೆಗಳಿರುವುದಾದರೂ ಅದಕ್ಕಾಗಿಯೆ.

ಗಾಯಿತ್ರಿ ಮಂತ್ರ ವೇದ ಮಂತ್ರವಾಗಿದೆ. ಗಾಯತ್ರಿ ವೇದ ಜನನಿ ಎನ್ನುತ್ತಾರೆ.
ಓಂ ಭೂರ್ಭುವಸ್ಸುವಃ
ತತ್ಸವಿತುರ್ವರೇಣ್ಯಂ|
ಭರ್ಗೋದೇವಸ್ಯ ಧೀಮಹಿ
ಧಿಯೋಯೋನಃ ಪ್ರಚೋದಯಾತ್||
ಅರ್ಥ:- ಎಲ್ಲ ಲೋಕಗಳಲ್ಲಿಯು ತೇಜೋ ರೋಪದಿಂದ ಪ್ರಕಾಶಿಸುವ ಭಗವಂತನು ನಮಗೆ ಬುದ್ಧಿ ಶಕ್ತಿಯನ್ನು ಕೊಟ್ಟು ಅವನ್ನು ಪ್ರಚೋದಿಸಲಿ.
ಗಾಯತ್ರಿ ಮಂತ್ರ ಹೇಳುವ ಮೊದಲು,
ಪರಬ್ರಹ್ಮ ಋಷಿಃ, ಪರಮಾತ್ಮಾ ದೇವತಾ,
ದೇವಿ ಗಾಯತ್ರಿ ಛಂದಃ,
ಪ್ರಾಣಾಯಾಮೇ ವಿಯೋಗಃ
ಎಂದು ಹೇಳಿ ಸಂಕಲ್ಪ ಮಾಡಿ ಜಪ ಧ್ಯಾನ ಮಾಡುವುದು ವೈದಿಕ ಪದ್ಧತಿ.

ಮಂತ್ರಗಳಲ್ಲಿ ಮೂರು ವಿಧ-ಬೀಜ ಮಂತ್ರ, ಮೂಲ ಮಂತ್ರ, ಮಾಲಾ ಮಂತ್ರ
ಋಷಿಗಳೇ ಮಂತ್ರದ ದೃಷ್ಟಾರರು. ಒಂದೊಂದು ಮಂತ್ರಕ್ಕೆ ಒಬ್ಬೊಬ್ಬ ದೃಷ್ಟಾರರು.
ಸಾಧಕನು ಋಷಿಯನ್ನು ಸ್ಮರಿಸಿದ ಬಳಿಕ ಛಂದಸ್ಸನ್ನೂ ಹೇಳುತ್ತಾನೆ. ಬಳಿಕ ಅಂಗನ್ಯಾಸ ಕರನ್ಯಾಸ ಮಾಡಿಕೊಳ್ಳುತ್ತಾನೆ.

ಮಂತ್ರ ಪಠಣವೆಂಬುದು ಮನೋನಿಯಂತ್ರಣಕ್ಕಾಗಿ,
ನಿಯಂತ್ರಣದಲ್ಲಿ ನಿಶ್ಚಲತತ್ವಕ್ಕಾಗಿ,
ನಿಶ್ಚಲತೆಯಲ್ಲಿ ನಿರ್ವಿಕಲ್ಪ ಸ್ಥಿತಿಗಾಗಿ.
ಅಂತಹ ಸ್ಥಿತಿ-ಸಿದ್ಧೀ ಸಾಧನೆಯಲ್ಲಿ ಕಂಡುಕೊಳ್ಳುವ ಮನಃ ಶುದ್ಧಿಗಾಗಿ.

ಮ:ನ ಶುದ್ಧಿ ಇಲ್ಲದವಗೆ ಮಂತ್ರದ ಫಲವೇನು?
ತನು ಶುದ್ಧಿ ಇಲ್ಲದವಗೆ ತೀರ್ಥದ ಫಲವೇನು?
ಭೋಗದಲ್ಲಿ ತನು ಮನಗಳೆರಡರ ನೈರ್ಮಲ್ಯ ಅಗತ್ಯ.
ಸದಾಚಾರವೇ ಸ್ನಾನ
ಸದ್ಭಾವನೆಯಿಂದಲೇ ಧ್ಯಾನ.


ಮಣಿಮಂತ್ರ ತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ|
ಮನಗಾಣಿಸಲು ನಿನಗೆ ದೈವದದ್ಭುತವ?||
ಮನುಜರೊಳಗಾಗಾಗ ತೋರ್ಪ ಮಹನೀಯಗುಣ|
ವನುವಾದ ಬೊಮ್ಮನದು-ಮಂಕುತಿಮ್ಮ||
-ಎನ್ನುತ್ತಾರೆ ಡಿ.ವಿ.ಜಿ.

ಮೈತೊಳೆಯುವುದು ಯಾಂತ್ರಿಕವಾದರೇನು? 
ಮನತೊಳೆಯುವುದು ಮಾತ್ರ ಮಾಂತ್ರಿಕವಾಗಬೇಕು.
ಮಾನವೀಯ ಮೌಲ್ಯಗಳೆಲ್ಲವೂ ನಮಗೆ ಮೂಲ ಮಂತ್ರಗಳೇ ಆಗಬೇಕು. ತನುಮನಗಳ ದಂಡನೆ ಸತ್ಯನಿಷ್ಠೂರತೆಯಿಂದ ಕೂಡಿರಬೇಕು.  ಸಂಯಮ ನಿಯಮಗಳ ಸಾಧನೆ ನಿರಂತರವಾಗಿರಬೇಕು.
ಏನೆ ಆಗಲಿ, ಜೀವನ್ಮುಕ್ತಿಯ ಸಿದ್ಧಿ-ಸಂಕಲ್ಪಗಳೆ ಶ್ರೇಷ್ಠ.
ಯಾವಾಗಲೂ ವಿಚಾರದಿಂದ ವಿವಶನಾಗುವುದಕ್ಕಿಂತ ಆಚಾರದಿಂದ ವಿವೇಕಶಾಲಿಯಾಗುವುದು ಲೇಸು.

Monday, July 4, 2011

ಹರಿಕಥಾ ಕೀರ್ತನ ಕಲೆ

ಅದು ಹದಿನೈದನೇ ಶತಮಾನದ ಕಾಲ. ಪತ್ರಿಕೆ ವ್ಯವಸಾಯ ಗೊತ್ತಿರದ ಮಧ್ಯಯುಗ. ಅಂದಿನಿಂದಲೂ ದೇಶದಾದ್ಯಂತ ಹಳ್ಳಿಗಳಿಂದ ಪಟ್ಟಣಗಳವರೆಗೆ ಆ ಬಾಲವೃದ್ಧರಾದಿಯಾಗಿ ಪಂಡಿತ ಪಾಮರರಿಗೆ ಸಮಸ್ತ ಸಾಮಾನ್ಯ ಜನತೆಗೆ ತತ್ವಬೋಧನೆ, ಮನೋರಂಜನೆ, ಮಾತುಗಾರಿಕೆ, ಕುಣಿತ ನರ್ತನಗಳಿಂದ ಸಂಮೋಹಿನಿಯೆನಿಸುವ ಹಾಗೇ ಏಕಮೇವ ಸಾಮಾಜಿಕ ಸಂಪರ್ಕ ಸಾಧನ ಹರಿಕಥೆಯೇ ಆಗಿತ್ತು.

ಜ್ಞಾನದಿಂದಲೇ ಕರ್ಮಫಲ ಸಾಫಲ್ಯವು. ತತ್ವಜ್ಞರಾದ ಗುರುಗಳಿಗೆ ಶರಣಾಗುವುದರಿಂದಲೇ ತಿಳಿವಿನ ಹರಿವು ವಿಸ್ತರಿಸುವುದು. ಗುರುವಿನ ಉಪದೇಶದಿಂದಲೇ ಶ್ರವಣ ಆರಂಭವಾಗುವುದು.
ಶ್ರವಣದಿಂದ ಜ್ಞಾನ. ಜ್ಞಾನದಿಂದ ಮನಕಾನಂದ.
ಆತ್ಮಾನಂದದಿಂದ ಮುಕ್ತ ಮನಸ್ಸು ಪ್ರಫುಲ್ಲಗೊಂಡಾಗ ಮೋಕ್ಷಕ್ಕೆ ಮಾರ್ಗ.
ಕೀರ್ತನ ಕಾರರು ಭಕ್ತಿಮಾರ್ಗದಿಂದ ಜ್ಞಾನಮಾರ್ಗದತ್ತ ಕೊಂಡೊಯ್ಯುವವರು. ಅವರು ತಮ್ಮ ದಾಸರ ಪದಗಳಲ್ಲಿ ಜನತೆಯನ್ನು ಚಿಂತನೆಗೆ ಹಚ್ಚಿದರು.

ಹರಿಕಥಾ ಕೀರ್ತನಕಾರರೋ ತಮ್ಮ ಪುರಾಣ ಕಥನ ಪ್ರವಚನಗಳಿಂದ ಕಥನಕಲೆಯ ಮೂಲಕ ಕಣ್ಣಿಗೆ ಕಟ್ಟುವಂತೆ ಹಾಡುತ್ತಾ ಬಣ್ಣಿಸುತ್ತ ಸಣ್ಣ ಪುಟ್ಟ ದೃಷ್ಟಾಂತಗಳಲ್ಲಿ ಪಂಡಿತರನ್ನು ಮಾತ್ರವಲ್ಲದೇ ಪಾಮರರನ್ನೂ ಭಕ್ತಿಭಾವದಿಂದ ತಲ್ಲೀನರಾಗುವಂತೆ ಮಾಡಿ, ಅವರಲ್ಲಿ ತತ್ವಾರ್ಥಚಿಂತನದಿಂದ ಸಮಾಜಿಕ ಬದಲಾವಣೆ ಮತ್ತು ಕಾಲಕಾಲಕ್ಕೆ ಸುಧಾರಣೆಯನ್ನುಂಟು ಮಾಡಿದವರು.
ಹರಿದಾಸರು ಕಥಾ ಪ್ರಾರಂಭಕ್ಕೆ ಮೊದಲು ನೆರೆದ ಶೋತೃಗಳಿಂದ ಸಾಮೂಹಿಕ ಸಂಕೀರ್ತನೆ ಹೇಳಿಸುತ್ತಿದ್ದರು-
ಲಕ್ಷ್ಮೀ ರಮಣ ಗೋವಿಂದಾ ಗೋವಿಂದ| ಆಂಜನೇಯವರದ ಗೋವಿಂದಾ ಗೋವಿಂದ||
ಸಖಸಂತನಕಿ ಜೈ| ಸದ್ಗುರು ಮಹಾರಾಜ್ ಕಿ ಜೈ||

ಇದು ಶೋತೃಗಳಲ್ಲಿ ದೈವಭಕ್ತಿ ಮತ್ತು ಸಾಮೂಹಿಕ ಶರಣಾಗತಿಯನ್ನು ಜಾಗೃತಗೊಳಿಸುವುದೇ ಆಗಿತ್ತು.
ನನ್ನ ಬಾಲ್ಯವೆಲ್ಲ ಕಳೆದದ್ದು ಭದ್ರಾವತಿಯ ಹಳೇ ನಗರದಲ್ಲಿ. ಅಲ್ಲಿ ಭದ್ರಾ ನದಿಯ ದಡದಲ್ಲಿ ರಾಮದೇವರು, ಸುಬ್ರಹ್ಮಣ್ಯಸ್ವಾಮಿ ಮತ್ತು ರಾಘವೇಂದ್ರ ಸ್ವಾಮಿಗಳ ಮಠದ ಸಮೀಪವೇ ಇತ್ತು ನಮ್ಮ ಮನೆ. ನಾನು ಗೋಲಿ, ಗಿಲ್ಲಿದಾಂಡು ಆಟವಾಡಿ, ಭಕ್ತಿ ಗೀತೆ, ಚಲನ ಚಿತ್ರಗೀತೆಗಳನ್ನು ಮನಸೋಇಚ್ಛೆ ಹಾಡಿಕೊಳ್ಳುತ್ತ ಕುಣಿದು ಕುಪ್ಪಳಿಸುತ್ತಿದ್ದ ಬಾಲ್ಯದ ಸವಿ ನೆನಪನ್ನು ಸದಾ ಕೆದಕುವ ಮನೆ ಅದು.
ಸಂಜೆಯಾಗುತ್ತಿದ್ದಂತೆ ಕೈಕಾಲು ಮುಖ ತೊಳೆದುಕೊಂಡು ಮನೆಯೊಳಗೆ ಬರಬೇಕು. ದೇವರ ನಾಮ ಸ್ತೋತ್ರ ಅಮ್ಮ ತಪ್ಪಿದರೆ ಅಕ್ಕ ಹೇಳಿಕೊಡಬೇಕು. ನಾನು ತಮ್ಮ ತಂಗಿಯರೊಂದಿಗೆ ಒಟ್ಟಿಗೇ ಕುಳಿತು ಹೇಳುವುದು ರೂಢಿಗತವಾಗಿತ್ತು.

ಅದು ಅಂದಿನ ಶ್ರಣ ಮನನದ ಕಾಲ. ಇದು ಇಂದಿನ ದೃಶ್ಯ ಮನೋಹರ ಅಲ್ಲಲ್ಲ ಹನನದ ಕಾಲ. ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗವೆಂದು ನಮಗೆ ಸದಾ ಸ್ಮೃತಿಯಲ್ಲುಳಿವಂತೆ ಮಾಡಿದ ಕಾಲವದು. ಆಗ ಶ್ರಾವಣಮಾಸ ಬಂತೆಂದರೆ ಸಾಕು, ನಮ್ಮ ಮನೆಯ ಎದುರಿಗೇ ಇದ್ದ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪ್ರತಿನಿತ್ಯ ಸಂಜೆ ಹರಿಕಥಾ ಕಾಲಕ್ಷೇಪವಿರುತ್ತಿತ್ತು. ಶ್ರಾವಣದಲ್ಲಿ ಆರಂಭವಾದದ್ದು ಕಾರ್ತೀಕ ಮಾಸ ಮುಗಿಯುವವರೆಗೂ ತಿಂಗಳಾನುಗಟ್ಟಲೆ ರಾಮಾಯಣ ಮತ್ತು ಮಹಾಭಾರತ ಹರಿಥೆಗಳಾಗಿ ಕಿಕ್ಕಿರಿದು ನೆರೆಯುತ್ತಿದ್ದ ಶೋತೃಗಳನ್ನು ರಂಜಿಸುತ್ತಿದ್ದವು; ಎಂಥವರಿಗೂ ಮನ:ಶ್ಯಾಂತಿ ಸಮಾಧಾನ ತಂದುಕೊಡುತ್ತಿದ್ದವು.
ಹರಿಕಥಾ ಕಾಲಕ್ಷೇಪ ನಡೆಸಿಕೊಡಲು ಕೀರ್ತನ ಕಾರರನ್ನು ಮೈಸೂರು, ಬೆಂಗಳೂರುಗಳಿಂದ ಮಾತ್ರವಲ್ಲದೇ ಆಂಧ್ರ ಮತ್ತು ಮದ್ರಾಸಿನಿಂದಲೂ ಕರೆಸುತ್ತಿದ್ದುದುಂಟು.

ಏನೇ ಆಗಲಿ ಆ ಕಾಲದ ಭಾವನೆಗಳೇ ಬೇರೆ...ಯಾಕೆಂದರೆ, ನನಗೆ ನೆನಪಿರುವಂತೆ ರಾಘವೇಂದ್ರ ಸ್ವಾಮಿ ಮಠದ ಮುಂಭಾಗದಲ್ಲಿ ಹಾಕಿದ ಚಪ್ಪರದಲ್ಲಿ ದಾಸರು ನಿಂತು ಕಥಾಕಾಲಕ್ಷೇಪವನ್ನು ಆರಂಭಿಸುತ್ತಿದ್ದರು. ಆ ದೊಡ್ಡ ಚಪ್ಪರದಲ್ಲಿ ಬಲಕ್ಕೆ ಹೆಂಗಸರಿಗೆ ಸ್ಥಳ ಕಾದಿರಿಸಲಾಗಿದ್ದರೆ, ಎಡಕ್ಕೆ ಗಂಡಸರಿಗೆ. ಚಿಕ್ಕ ಪುಟ್ಟ ಮಕ್ಕಳಿಗೆ ದಾಸರ ಮಂದೇನೇ ಪಕ್ಕವಾದ್ಯ ನುಡಿಸುವವರ ಹತ್ತಿರವೇ ಎನ್ನಬೇಕು. ಆಶ್ಚರ್ಯವೆಂದರೆ, ನಾವು ಮಕ್ಕಳೂ ಗಲಾಟೆ ಮಾಡದೇನೆ ಸುಮಾರು ಒಂದೂವರೆ ಗಂಟೆ ತದೇಕಚಿತ್ತದಿಂದ ರಾಮಾಯಣ ಅಥವಾ ಮಹಭಾರತ ಮುಂತಾದ ಪುರಾಣ ಕಥೆಗಳನ್ನು ಕೇಳುತ್ತಿದ್ದುದು. ಅವು ಇಂದಿನ ಟಿ.ವಿ.ಧಾರಾವಾಹಿಗಳಿಗಿಂತಲೂ ನಯನ ಮನೋಹರವಾಗಿದ್ದವೆಂದರೆ ಉತ್ಪ್ರೇಕ್ಷಯೇನಿಲ್ಲ. (ಪ್ರಾಯಶಃ ರಾಮಾನಂದ ಸಾಗರ್ ರವರ ರಾಮಾಯಣ ಮತ್ತು ಬಿ.ಆರ್ ಚೋಪ್ರಾ ಅವರ ಮಹಾಭಾರತವನ್ನು ಹೊರತು ಪಡಿಸಿದರೆ).

ದಾಸರುಗಳಿಂದ ಹರಿಕಥಾ ಪ್ರಸಂಗ ನಡೆಯುತ್ತಿರುವ ಸಂದರ್ಭದಲ್ಲಿ, ಸಾವಿರಾರು ಶೋತೃಗಳು ತನ್ಮಯರಾಗಿ ಕೇಳುತ್ತಿದ್ದರೆ, ಪಶುಗಳೂ ಅವರೊಡನೆ ಭಾಗಿಗಳಾಗುತ್ತಿದ್ದವೆಂದರೆ ಅತಿಶಯೋಕ್ತಿಯಲ್ಲ. ಅದಕ್ಕೆ ಉದಾಹರಣೆಯಾಗಿ ಹೇಳಬೇಕೆಂದರೆ- ಅಂದು ರಾಮಾಯಣ ಕಥಾ ಕಾಲಕ್ಷೇಪ ನಡೆಯುತ್ತಿರುವಾಗ ಸೊಂಪಾಗಿ ಮೈತುಂಬಿಕೊಂಡಿದ್ದ ಬಿಳಿ ಹಸುವೊಂದು ಸ್ಥಳಕ್ಕೆ ಆಗಮಿಸುತ್ತಿತ್ತು. ಅದಕ್ಕೆ ಯಾವಾಗಲೂ ಮಕ್ಕಳ ಸಮೀಪ ಅಂದರೆ ದಾಸರ ಮುಂಭಾಗದ ಸೀಟು ರಿಸರ್ವ್ ಆಗಿರುತ್ತಿತ್ತೆಂದರೆ ನೀವು ಆಶ್ಚರ್ಯ ಪಡುತ್ತೀರಿ. ಹಾದು, ಒಂದೊಮ್ಮೆ ಲೇಟಾಗಿ ಬಂತೆಂದರೆ ಸುಮ್ಮನೆ ಧಾವಿಸಿ ಮುನ್ನುಗ್ಗಿ ಬರುತ್ತಿತ್ತು. ಮುಂದಿರುವ ಅದರ ಜಾಗವನ್ನು ಯಾರೇ ಆಕ್ರಮಿಕೊಂಡಿರಲ್ಲಿ ತಟ್ಟನೆ ಎದ್ದು ಅದಕ್ಕೆ ಕುಳಿತುಕೊಳ್ಳಲು ಅನುವು ಮಾಡಿಕೊಡುವುದು ರೂಢಿಯೇ ಆಗಿಹೋಗಿತ್ತು. ಹೊಸ ಶೋತೃಗಳೇನಾದರೂ ಎದ್ದು ಗಾಬರಿಬಿದ್ದರೆ ದಾಸರು "ಹೆದರ ಬೇಡಿ ಕುಳಿತುಕೊಳ್ಳಿ" ಎಂದು ಧೈರ್ಯ ಹೇಳುತ್ತಿದ್ದರು.

ದಾಸರಾದರೋ ಅದು ಬಂತೆಂದರೆ, ತಮ್ಮ ಪಕ್ಕವಾದ್ಯದ ಮೂಲಕ ವಿಶೇಷ ಸ್ವಾಗತ ನೀಡುತ್ತಿದ್ದರು. ಆ ಗೋವು ಅಂದಿನ ಕಥೆ ಮುಗಿಯುವವರೆಗೆ ಏನೂ ಗಲೀಜು ಮಾಡದೇ ಮೆಲುಕುಹಾಕುತ್ತ ಪ್ರಧಾನ ಶೋತೃಗಳಲ್ಲಿ ಪ್ರಥಮಸ್ಥಾನ ಪಡೆದಿರುತ್ತಿತ್ತು. ಕಥಾಕಾಲಕ್ಷೇಪ ಮುಗಿದು ದಾಸರು,
ಶರಣರ ಸುರಭೂಜ ಗುರುರಾಜ... ಕಾಮಿತಾರ್ಥಗಳ ಕಾಮಧೇನುವಿನ ತೀಮವೀರಿ ಕೊಡುವೋ ಮಗರಾಜ ಎಂದು ಮಂಗಳ ಹಾಡುತ್ತಿದ್ದಂತೆಯೆ ಆ ಗೋವೂ ಕೂಡ ತಟ್ಟನೆದ್ದು ನಿಲ್ಲುತ್ತಿತ್ತು. ಎಲ್ಲರೊಂದಿಗೆ ತಾನೂ ಹಿಂದಿರುಗಿ ಹೋಗುತ್ತಿದ್ದುದು, ಆ ಸಂದರ್ಭ ಸನ್ನಿವೇಶಗಳೆಲ್ಲವೂ ಇಂದಿಗೂ ನನ್ನ ಕಣ್ ಕಟ್ಟಿದಂತೇ ಇದೆ

Wednesday, April 16, 2008

ಐನ್ ಸ್ಟೈನ್ ಮತ್ತು ದೇವರ ನಂಬಿಕೆ

ಐನ್ ಸ್ಟೈ ನ್ ಇಪ್ಪತ್ತನೇ ಶತಮಾನದ ಜಗತ್ತಿನ ಅತಿ ದೊಡ್ಡ ಭೌತಶಾಸ್ತ್ರಜ್ಞ. ಹಾಗೂ ಗಾಂದೀಜಿಯಂತೆಯೇ ಶಾಂತಿ ದೂತ. ಚಿಕ್ಕ ವಯಸ್ಸಿನಲ್ಲೇ ಸಾಪೇಕ್ಷ ಸಿದ್ಧಾಂತ, ಶಕ್ತಿ ಸಿದ್ಧಾಂತ ಮುಂತಾದ ವಿಷಯಗಳ ಮೇಲೆ ಅತಿ ಮಹತ್ವದ ಪ್ರಬಂಧಗಳನ್ನು ಬರೆದು ವಿಶ್ವದಾದ್ಯಂತ ಹೆಸರು ಗಳಿಸಿದ.  ಈ ವಿಜ್ಞಾನಿ ಆಗಾಗ ತನ್ನ ಮಾತಿನಲ್ಲಿ ದೇವರ ಹೆಸರು ತರುತ್ತಿದ್ದುದುಂಟು.  ಆದರೆ,  ಜನ ಸಾಮಾನ್ಯರು ಬಳಸುವ ಅರ್ಥದಲ್ಲಲ್ಲ. ದೈವ ವಿಶ್ವಾಸಿಯಲ್ಲದ ಐನ್ ಸ್ಟೈನ್ ಗೆ ದೇವರೆಂದರೆ ವಿಶ್ವದ ಮೊಲ ಹಾಗೂ ಏಕಮೇವ ವೈಜ್ಞಾನಿಕ ಸೂತ್ರಕ್ಕೆ ಪರ್ಯಾಯ  ಪದವಾಗಿತ್ತು, ತನ್ನ ಆಯಸ್ಸಿನ ಕೊನೆಯ ಸುಮಾರು ನಲವತ್ತು ವರ್ಷಗಳನ್ನು ಆತ ಈ ರಹಸ್ಯವನ್ನು ಬಿಡಿಸುವ ಪ್ರಯತ್ನದಲ್ಲಿ ಕಳೆದನೆನ್ನಬಹುದು.  ಈ ತನ್ನ ಶಂಶೋಧನಾ ವಿಷಯಕ್ಕೆ ಅವನು ಸಮೀಕೃತ ಕ್ಷೇತ್ರ ಸಿದ್ಧಾಂತ" (Unified field theory)  ಎಂದ ಹೆಸರು ಕೊಟ್ಟಿದ್ದ.

ಐನ್ ಸ್ಟೈ ನ್ ನಾಲ್ಕು ದಶಕಗಳ ಕಾಲ ಯತ್ನಿಸಿದರೂ ಸಮೀಕೃತ ಕ್ಷೇತ್ರ ಸಿದ್ಧಾಂತ ಒಂದು ಹಗಲುಗನಸಾಗಿಯೆ ಉಳಿಯಿತು.  ಮನುಷ್ಯರಿಂದ ತಿಳಿಯಲಾರದ ಸತ್ಯವಾಗಲಿ ಮೊಲ ಸೂತ್ರವಾಗಲಿ ಇದೆಯೆಂದಾದರೆ, ಅದು ಇದೆ ಎಂದು ಸಾಧಿಸುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೆ ಇಲ್ಲವೆಂದು ಸಾಧಿಸುವುದೂ ಕೂಡ ಅಸಾಧ್ಯ.  ಆದ್ದರಿಂದ, ಆ ಕುರಿತಾದ ಚರ್ಚೆಯೆ ಅರ್ಥಹೀನವಾಗುತ್ತದೆಎ.  ಆದರೆ, ಅ ಕುರಿತಾದ ಸಂಶೋಧನೆ ಅರ್ಥಹೀನವಾಗುವುದಿಲ್ಲ.

ಭೌತ ಜಗತ್ತಿನ ಹಿಂದೆ ಸಮೀಕೃತ ಸೂತ್ರವಿದೆಯೆಂಬ ನಂಜಿಕೆಯಾದರೂ ಏಕೆ?  ಕೆಲವು ವರ್ಷಗಳ ಹಿಂದೆ  ಇದು ಕೇಳಬಾರದ ಪ್ರಶ್ನೆ.  ಆದರೆ, ಈಗ ಹಾಗಲ್ಲ, ವೈರುಧ್ಯಗಳನ್ನು ಅನುಮಾನಗಳನ್ನು ಬಹಳತ್ವವನ್ನು ಒಪ್ಪಿಕೊಳ್ಳುವುದು ಇಂದು ಸಾಧ್ಯ.   ಆದ್ದರಿಂದ, ಅನೇಕ ಸೂತ್ರಗಳು ಕೆಲವೊಂದು ಪರಸ್ಪರ ವಿರುದ್ಧವಾದವು ಕೂಡಾ ಲೋಕದಲ್ಲಿ ಒಟ್ಟೊಟ್ಟಿಗೇ ಇರಬಾರದೇಕೇ ಎಂದು ನಾವು ಕೇಳಬಹುದು.

ಜಗತ್ತಿನ ಶಕ್ತಿಗಳೆಲ್ಲ ಸಾಂಗತ್ಯದಲ್ಲಿವೆ ಎಂಬ ನಂಬಿಕೆಯ ಹಿಂದೆ ಅವು ಹಾಗೆ ಇರಬೇಕು ಎಂಬ ಅಭಿಲಾಷೆಯೆ ಹೆಚ್ಚು ಕೆಲಸ ಮಾಡುವ ಹಾಗೆ ಕಾಣುತ್ತದೆ.

ದೇವರನ್ನು ಕಳಕೊಂಡ ಮನುಷ್ಯ ಈ ಶೂನ್ಯವನ್ನು ತುಂಬುವುದಕ್ಕೆ ಅದಕ್ಕೆ ಸರಿಸಮನಾದ ಇನ್ನೊಂದು ಉಪಸ್ಥಿತಿಯನ್ನು ಬಯಸುತ್ತಿರಬಹುದೇ...?

( ಕೆ.ವಿ.ತಿರುಮಲೇಶ್ ಅವರ ಲೇಖನದಿಂದ, ವಿಜಯ ಕರ್ನಾಟಕ-15-02-2008 )

Monday, April 14, 2008

ಮನುಷ್ಯರಿಗಿಂತ ದೇವರಲ್ಲಿ ಹೇಳಿಕೊಳ್ಳಬಹುದು...

ನಮ್ಮ ಕಷ್ಟ-ಸುಖ ದೇವರಲ್ಲಿ ಹೇಳಿಕೊಳ್ಳಬಹುದು. ಮನುಷ್ಯರಲ್ಲಿ ಹೇಳಿಕೊಳ್ಳೋದಿದೆಯಲ್ಲ; ಅದೂ ಕಷ್ಟವೇ ಸರಿ. ನಮ್ಮ ಸುಖ ನಾವು ಹೇಳಿಕೊಳ್ಳೋದು ಸರಿಕಾಣದು. ಕೇಳಿದರೆ ಪರವಾಗಿಲ್ಲ ಚೆನ್ನಾಗಿದ್ದೀವೆ ಎನ್ನುತ್ತೇವೆ. ನಾವು ಹೇಳಿಕೊಳ್ಳದಿದ್ದರೂ ಕಂಡು ಕರುಬುವವರಿಗೇನೂ ಕಡಿಮೆ ಇಲ್ಲ.  ಕಷ್ಟ ಅಂತೂ ಬಿಡಿ, ಹೇಳಿಕೊಂಡರೆ ಮೆಲ್ಲನೆ ಹಿಂದೆ ಸರಿವವರೇ ಇದಾರೆ.  ಹಾಗೇನಾದರೂ ಸಂಕಷ್ಟ ಕೇಳಿದರೆ ಆ ಸಂದರ್ಭದಲ್ಲಿ ಅವರೇ ದೇವರಾಗಿರುತ್ತಾರೆ;ಅಲ್ಲವೇ?  ಹೌದು, ಸರಿ ಸರಿಯಾಗಿ ಬದುಕುತ್ತಿದ್ದರೆ ಪರಿಪರಿಯಾದ ನೆಂಟರು! ಇಲ್ಲದಿದ್ದರೆ, ಇವನದೇನಪ್ಪ ಇದ್ದದ್ದೇ ಪಿರಿ ಪಿರಿ ಅನ್ತಾರೆ.

ಬಡವರ ಕಷ್ಟ ಅರ್ಥವಾಗುವಂಥ ಉಳ್ಳವರು ವಿರಳ. ಅದಕ್ಕೇ ಹೇಳೋದು "ಬಡವರ ಕಷ್ಟ ಭಗವಂತನಿಗೇ ಗೊತ್ತು" ಅಂತ.  ದುಷ್ಟರಿಗಂತೂ ಅರ್ಥವಾಗೋದೇ ಇಲ್ಲ ಬಿಡಿ. ಈ ಭಾರತ ದೇಶ ಬಡಬಗ್ಗರ ದೇಶ. ನಮ್ಮ ಬಡ ಜನತೆ ಭಗವಂತನಲ್ಲಿಟ್ಟಿರವ ನಂಬಿಕೆ ವಿಶ್ವಾಸ ವಿದೇಶೀಯರನ್ನೂ ಮೂಕ ವಿಸ್ಮಿತರನ್ನಾಗಿಸಿದೆ.

ನಮ್ಮ ಪುಢಾರಿಗಳಿಗಂತೂ ಬಡವರು ಬಡವರಾಗಿರಬೇಕು; ಬುದ್ಧಿಗೂ ಅವರಿಗೆ ದಾರಿದ್ರ್ಯವಿರಬೇಕು ಆಗಲೇ ಅವರ ಬೇಳೆ ಬೇಯೋದು ಎಂಬೋದು ಅವರ ಚುನಾವಣೆಯ ಕಾಲದಲ್ಲಿ ಗೊತ್ತಾಗದೇ ಇರದಲ್ಲ!  ಬರೇ ಬಡವರ ಕಣ್ಣೀರೊರೆಸುವ ನಾಟಕ! ಅದಕ್ಕೇ ಕರವಸ್ತ್ರ ಕೊಟ್ಟ ಹಾಗೆಯೇ ಒಂದಿಇಷ್ಟು ಹಾಕಿಯೊ ತಮ್ಮ ಸ್ವಾರ್ಥ ಸಾಧನೆ ಮಾಡ್ಕೋತಾರೆ ಇಂಥ "ದೊಡ್ಡ ಮನುಷ್ಯರು"  ಆದರೆ, ನಮ್ಮ ಬಡ ಜನತೆ ಈಗೀಗ ಬುದ್ಧಿವಂತರಾಗ್ತಿದಾರೆ. ಅವರಿಗೊತ್ತು ಇಂಥ ನಯವಂಚಕರಿಗೆಲ್ಲ ಚಳ್ಳೇ ಹಣ್ಣು ತಿನ್ಸೋದು ಹೇಗೆಂತ?

ಅಷ್ಟಕ್ಯೂ ಮನುಷ್ಯ ಕಷ್ಟಪಟ್ಟೇ ಜೀವನದಲ್ಲಿ ಮುಂದೆ ಬರಬೇಕೆಂದೂ ಹೇಳುತ್ತಾರೆ; ಈ ನಮ್ಮ ಜನ. ಅಂಥ ಕಷ್ಟ ಸಹಿಷ್ಣುಗಳು!  ಜೊತೆಗೆ ಭಗವಂತನಲ್ಲಿ ನಂಬಿಕೆ ಇರಬೇಕು ಅಂತಾರೆ. ಅವನಲ್ಲಿ ನಂಬಿಕೆ ಇಟ್ಟು ಆಶ್ಚರ್ಯಕರ ರೀತಿಯಲ್ಲಿ ತಮ್ಮ ಸಂಕಟಗಳಿಂದ ಪಾರಾದವರಿದ್ದಾರೆ. ಅಂಥ ನಿಶ್ಚಲ ನಂಬಿಕೆಯಿಂದಲೇ ಈ ಭವದ ಬದುಕು ನಡೆಯುವುದೂ ಕೂಡ. ಇಲ್ಲವಾದರೆ, ಈ ಪಾಟಿ ಜನಸಂಖ್ಯೆ ಹೆಚ್ಚುತ್ತಿರಲಿಲ್ಲ. ಯಾಕಂದರೆ, ಎಂಥ ಕೆಟ್ಟ ಕಾಯಿಲೆ ಬಂದ್ರೂ (ಕಾಯಿಲೆಯಂಥ ಮಹಾ ಶತ್ರು ಬೇರೇನಿಲ್ಲ) ಬದುಕುವ ಛಲ ಬಿಡದೇ ಎಲ್ಲಿಂದಲಾದ್ರೂ ದುಡ್ಡು ಹೊಂದಿಸಿ ನರ್ಸಿಂಗ್ ಹೋಂಗಳಿಗೂ ದುಡ್ಡು ಸುರಿಯೋ ಬಡವರು ಇರುತ್ತಿರಲಿಲ್ಲ; ಖಂಡಿತ ಬದುಕುವುದಕ್ಕೇ ಇಷ್ಟಪಡುತ್ತಿರಲಿಲ್ಲ.

ಅದಕ್ಕೇ ಹೇಳ್ತಾರೆ: ಭಗವಂತನಲ್ಲಿ ನಂಬಿಕೆ ಇರಬೇಕು. ಅವನ ದಯೆಯೊಂದಿದ್ದರೆ ಸಾಕು, ಯಾರಾದರೂ ಪುಣ್ಯಾತ್ಮರು ಸಹಾಯಕ್ಕೆ ಬಂದೇ ಬರ್ತಾರೆ ಎಂಬುದೇ ಅಚಲ ನಂಬಿಕೆ. ಹಣದಿಂದಲೇ ಎಲ್ಲವೂ ಆಗೋದಿಲ್ಲ ಎಂಬ ಅನುಭವ ಉಳ್ಳವರಿಗೂ ಉಂಟಲ್ಲ!  

ಮನುಷ್ಯ ಕಷ್ಟಪಟ್ಟೇ ಮುಂದೆ ಬರಬೇಕೆಂದೂ ಹೇಳುತ್ತಾರೆ. ಇಲ್ಲ ಕಷ್ಟಾಂದ್ರೇ ಏನೂಂತ ಸುತ್ತಮುತ್ತ ನೋಡಿಯಾದರೂ ತಿಳಕೊಂಡಿರಬೇಕು. ಆಗ ಮಾತ್ರ ನರ ಹರನಾಗಲು ಸಾಧ್ಯವಾದೀತು. ಆತನಿಗೆ ನೆರವಾಗಲು ಮನಸ್ಸಾದೀತು!

ಯಾವ ಮಹತ್ಕಾರ್ಯವೂ ಹೃದಯವನ್ನೇ ತೆರೆದಿಡದೇ, ಕಿಂಚಿತ್ ತ್ಯಾಗವಿಲ್ಲದೇನೆ ಆಗಲಾರದು. ಯಾವಾಗಲೂ ನೈಜ ಸಾಧಕರ ಹಿಂದೆ ಕಷ್ಟಗಳ ಪರಂಪರೆಯೇ.  ಅದನ್ನೆಲ್ಲ ದಾಟಿಯೇ ತಮ್ಮ ಅನುಭವದ ತೇಜಿಯಲ್ಲಿ ಅನುಭಾವದ ಮೊಟೆ ಹೊತ್ತೇ ಬಂದಿರುತ್ತಾರವರು. ಅವರ ಅಸ್ಖಲಿತ ನುಡಿಗಳು, ಅಚಲ ವಿಶ್ವಾಸಗಳು ಎಂದಿಗೂ ತೇಜೋಮಯ. ಅವನ್ನು ಅಳಿಸಿಬಿಡುವೆವೆಂದು ದುಷ್ಟಶಕ್ತಿಗಳು ಯತ್ನಿಸಿದರೂ ಅವೆಂದಿಗೂ ದೈವಿಕವಾಗಿ ವಿಝ್ರಂಭಿಸಿಯೆ ತೀರುವುವು. ಇಲ್ಲದಿದ್ದರೆ ಮತ್ತೊಂದು ಬೆಳಗಿನೆಡೆಗೆ ಮನುಷ್ಯನ ಆಶಯ ಮತ್ತು ಆಸಕ್ತಿಗಳು ಇರುತ್ತಲೇ ಇರಲಿಲ್ಲ!

Saturday, April 12, 2008

ದೇವರಿಂದ ಪಡೆಯುವುದೇಕೇ...?

ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ದೇವರಿಂದ ಪಡೆಯ ಬೇಕೆಂದೇ ಪೂಜೆ ಪುನಸ್ಕಾರಗಳನ್ನು ಮಾಡುವವರೂ ತತ್ ಕ್ಷಣ ಏನೊಂದನ್ನೂ ಸ್ಪಷ್ಟವಾಗಿ ಹೇಳಲಾರರು. ನಮ್ಮ ನಮ್ಮ ನಂಬಿಕೆ ಎಂದಾರಷ್ಟೇ.

ಪಂಚಭೂತಗಳಿಂದ ಸೃಷ್ಟಿಯಾದ ಈ ದೇಹ ಆ ದೇವರ ಕೊಡುಗೆ. ಬಂದದ್ದು ಬೆತ್ತಲೆ. ಉಟ್ಟದ್ದು ಭವದ ಬಟ್ಟೆ. ಬಿಟ್ಟು ಹೋಗುವಾಗ ತಟ್ಟನೆ ಕಣ್ಣಿಗೆ ಕಾಣದ ಅರಿವಿಗೆ ಬಾರದ ಕತ್ತಲೆ! ಬರಿ ಮೈ ತಣ್ಣಗೆ ಉರಿದು ಹೋದ ಮೇಲೆ ಮತ್ತದೆ ಪಂಚಭೂತಗಳಲ್ಲಿ ಲೀನ. ಈ ಜೀವ ಕೊಂಡು ಹೋಗುವುದೇನು? ಕತ್ತಲೆಯಿಂದ ಆ ಬೆಳಕಿನೆಡೆಗೆ? ಪೂರ್ಣತ್ವದಿಂದ ಪರಿಪೂರ್ಣದೆಡೆಗೆ. ನಶ್ವರತೆಯಿಂದ ಅಮರತ್ವದೆಡೆಗೆ...

ಈ ಭೌತಿಕ ಶರೀರದಲ್ಲಿ ಪಡೆದದ್ದೆಲ್ಲವೂ ಪೂರ್ವಾರ್ಜಿತವೆಂಬ ನಂಬಿಕೆ. ಸುಖಭೋಗಗಳು ಪುರುಷಾರ್ಥವೆಂಬುದು ವಾಡಿಕೆ.   ಆದರೆ,ಪರಾರ್ಥ ಇಲ್ಲದ ಸಾಧಕ-ಬಾಧಕಗಳು ಪೌರುಷೇಯವಾಗಲಾರವು. ಹಾಗೆ ಆಗುವುದಿದ್ದರೆ, ಬಲಾಢ್ಯರಾದವರೆಲ್ಲ ಅಂದರೆ, ಹಣವಂತರೂ ಸಹ ತಾವು ಬಯಸಿದ್ದೆಲ್ಲವನ್ನೂ ಪಡೆಯುತ್ತಿದ್ದರು. ಜೀವನ ಪರ್ಯಂತ ನೋವು ನಷ್ಟಗಳಿಲ್ಲದೇ, ದೇವರಿಗೆ ಕೈ ಮುಗಿಯದೇನೆ ಸುಖಿಗಳಾಗಿಯೆ ಕಳೆಯುತ್ತಿದ್ದರು. ಯಾವ ಕಾರಣಕ್ಕೂ ಕಣ್ಣೀರು ತುಂಬಿ ಬರುತ್ತಿರಲಿಲ್ಲ; ಅವರ ಕೆನ್ನೆಯ ಮೇಲೆ ಇಳಿಯುತ್ತಿರಲಿಲ್ಲ. ದಯೆಯೇ ನ್ಯಾಯದ ಊರುಗೋಲಾಗುತ್ತಿರಲಿಲ್ಲ. ದೇವರಲ್ಲಿ ನಂಬಿಕೆ ಎಂಬುದೇ ಉಳಿಯುತ್ತಿರಲಿಲ್ಲ. ದೀನ ದಲಿತರಿಗೆ ಅಲ್ಪ ಸ್ವಲ್ಪ ಕೊಡುವ ಮನಸ್ಸೂ ಇರುತ್ತಿರಲಿಲ್ಲ. ಸಮಾಜ ಸುಧಾರಣೆ ಎಂಬ ಸೊಲ್ಲೂ ಕೇಳುತ್ತಿರಲಿಲ್ಲ. ಪ್ರಪಂಚದೆಲ್ಲೆಡೆ ಸರ್ವಾಧಿಕಾರವೇ ವಿಜೃಂಭಿಸಿರುತ್ತಿತ್ತು.

ಅಪ್ರಾಪ್ತ ಪ್ರಾಸ್ಯಂ ಯೋಗಃ

ಪ್ರಾಪ್ತಸ್ಯ ಸಂರಕ್ಷಣಂ ಕ್ಷೇಮಃ

ಪೆಡಯದ್ದನ್ನು ಪಡೆಯುವುದು ಯೋಗ. ಮತ್ತು ಪಡೆದುದನ್ನು ರಕ್ಷಿಸುವುದು ಕ್ಷೇಮ. ಯೋಗ ಎಲ್ಲ ತತ್ವ ಜ್ಞಾನಗಳ ಮೂಲ. ಮಾನವನ ಮಾನಸಿಕ ಸ್ಥಿರತೆಗೆ ಸಾಧನ. ಅವನ ಎಲ್ಲ ನೋವುಗಳಿಗೆ ಅಂತ್ಯ. ಯೋಗ ಸಾಧನೆ ಮಾಡುವುದರಿಂದ ಸಿದ್ಧಿ, ಸ್ಥಿತ ಪ್ರಜ್ಞೆ. ಯೋಗಾಯೋಗ ಒದಗಿ ಬರುವುದೂ ನೈಪುಣ್ಯತೆ ಮಾತ್ರದಿಂದಲ್ಲ; ದೈವಿಕತೆಯ ಮಹತ್ವದಿಂದ.  ಪಡೆದದ್ದೆಷ್ಟೆಂದು ಕೇಳಿದರೆ, ನಿಜಕ್ಕೂ ಸಾತ್ವಿಕವೆನಿಸುವ ಮಾರ್ಗದಲ್ಲಿ ಮತ್ತು ಯೋಗ ಸಾಧನೆಯಿಂದ ಪಡೆದದ್ದಷ್ಟೇ.  ಅದೇ ಬದುಕಿನ ಭಾಗ್ಯ ಪುರುಷ ಪುರುಷೋತ್ತಮ ನಾಗುವುದು, ಸ್ತ್ರೀ ದೇವತೆಯೆನಿಸುವುದು ಪಾರಮಾರ್ಥಿಕ ಚಿಂತನೆಯ ತಳಹದಿಯಿಂದಲೇ; ಯೋಗ ಸಿದ್ದಿಯ ಬಲದಿಂದಲೇ.

ಪಡೆಯುವುದೆಂದರೆ ಹೀಗೆ. ಇನ್ನು ಮರಳಿಸುವುದೆಂದರೆ ಹೇಗೆ?

ಕೆರೆಯ ನೀರನು ಕೆರೆಗೆ ಚೆಲ್ಲಿ

ವರವ ಪಡೆದವರಂತೆ ಕಾಣಿರೊ

ಹರಿಯ ಕರುಣದೊಳಾದ ಭಾಗ್ಯವ

ಹರಿ ಸಮರ್ಪಣೆ ಮಾಡಿ ಬದುಕಿರೋ

-ಎಂದರು ಪುರಂದರ ದಾಸರು.

ಈ ನೆಲದ ಋಣ. ಜಲದ ಋಣ ಮತ್ತು ಮಾತಾ ಪಿತೃಗಳ ಋಣ ಮರಳಿಸುವ ಮನಸ್ಸು ಈ ಕಾಲದಲ್ಲಿ ಎಲ್ಲರಿಗೂ ಬರುವುದುಂಟೇ...? ಬದುಕಲು ಕಿಂಚಿತ್ ಸ್ವಾರ್ಥ ಬೇಕು ನಿಜ. ಆದರೆ, ಧನ, ಕೀರ್ತಿ ಶನಿ ಪದೋನ್ನತಿ ಹಾಗೂ ಅಧಿಕಾರ ಲಾಲಸೆಗಳು ಹಾಗೆ ಮಾಡಗೊಡುತ್ತವೆಯೆ..

Friday, July 27, 2007

ದೇವರು ಮತ್ತು ನಾವು

”ದೇವರು ಎಲ್ಲಿದ್ದಾನೆ ಬಿಡಿ! ಅವನು ಇದ್ದಿದ್ದರೆ ಇಷ್ಟೆಲ್ಲ ಅನ್ಯಾಯ-ಅನಾಚಾರ ಆಗುತ್ತಿರಲಿಲ್ಲ. ಅವನು ಕಣ್ಮುಚ್ಚಿ ಕುಳಿತಿದ್ದಾನೆ. ಕಲ್ಲಾಗಿದ್ದಾನೆ” ಹೀಗೆ ಹೇಳುವವರಿದ್ದೇವೆ. ಅತೀವ ಕಷ್ಟ ಕಾರ್ಪಣ್ಯಗಳಿಂದ,ಮಾನಸಿಕ ತಳಮಳ,ಹಿಂಸೆ-ಕಿರುಕುಳದಿಂದ ಬೇಸತ್ತಾಗ ನಿಜವಾಗಲೂ ದೇವರು ಎಲ್ಲಿದ್ದಾನೆ? ದೇವರು ಎಂದರೇನು ಚಿಂತಾಕ್ರಾಂತರಾಗುತ್ತೇವೆ...

ಚನ್ನ ವೀರ ಎಂಬ ಶರಣರೊಬ್ಬರು-
ದೇವರು ಎಲ್ಲಿಲ್ಲ? ದೇವರಲ್ಲಿ ಇದ್ದವರು ಗೆದ್ದವರು ಎಂಬ ಮಾರ್ಮಿಕ ಪ್ರಶ್ನೆಯಿಂದ ನಮ್ಮೊಳಗೇ ನಾವು ದೇವರನ್ನು ಹುಡುಕುವಂತೆ ಮಾಡುತ್ತಾರೆ.

ದೇವರು ಎಲ್ಲರಲ್ಲೂ ಇದ್ದಾನೆ. ಎಲ್ಲಾ ಕಡೆಯೊ ಇದ್ದಾನೆ ಎಂಬ ನಂಬಿಕೆಯೆ ಅನೂಚಾನವಾಗಿ ಬಂದಿದೆ. ಅಲ್ಲದೇ ದೇವರಿಲ್ಲ ಮಾನವೀಯತೆ ಎಂಬುದೇ ಸತ್ತಿದೆ. ದಯಾಮಯನಾದ ದೇವರು ಇದ್ದಿದ್ದರೆ ಯಾಕೆ ಹೀಗೆ ಸುಮ್ಮನಿರುತ್ತಿದ್ದ...? “ಯದಾ ಯದಾಹಿ ಧರ್ಮಸ್ಯ... “ಎಂಬಂತೆ ಅವನೇಕೆ ಇನ್ನೂ ಅವತರಿಸಿಲ್ಲ; ಅವನು ಹಾಗೆ ಅವತರಿಸುವುದೆಂದರೆನು? ಎಂಬುದರ ಮೇಲೇ ಸ್ವತಃ ಆತ್ಮಶೋಧನೆ, ಹೊರಗೂ ಹಿಂದು ಮುಂದಿನ ಸಂಗತಿಗಳಿಂದ ಸಂಶೋಧನೆಗಳನ್ನೇನೂ ಮಾಡಲಾರದೇನೆ ದೇವರಿಗೆ ಎಷ್ಟೋ ರೂಪಗಳು, ಅವನಿಗೆ ಎಷ್ಟೋ ಹೆಸರುಗಳು, ಹೆಂಡತಿಯರು? ಅವನು ಯಾವ ಜಾತಿಯವನು? ಯಾವ ಯಾವ ಜಾತಿಗಳಲ್ಲಿ ಅವನನ್ನು ಹೇಗೆ ಪೂಜಿಸುತ್ತಾರೆ; ಆರಾಧಿಸುತ್ತಾರೆ? ದೇವರೆಂಬುದೇ ಒಂದು ಮೊಢ ನಂಬಿಕೆ. ಅಂಥ ಮೊಢ ನಂಬಿಕೆಯಿಂದಲೇ ನಮ್ಮ ಬಡಪಾಯಿ ಜನ ಬದುಕುತ್ತಿದ್ದಾರೆ;(ನಿಜಕ್ಕೂ ದೇವರ ಹೆಸರಲ್ಲಿ ಶೋಷಣೆ ಮಾಡುವವರಿರಬಹುದು. ಆ ಮಾತು ಬೇರೆಯೆ)ಎಂಬಂತಹ ಸಂಶೋಧನಾತ್ಮಕ ಪ್ರಬಂಧಗಳನ್ನೇ ಬರೆದು ಖ್ಯಾತಿಗಳಿಸುವಂಥ ಗಣ್ಯಾತಿ ಗಣ್ಯರಿದ್ದಾರೆ!

ನಮ್ಮ ಇದೇ ಯುಗದಲ್ಲಿ ಆಗಿ ಹೋದ ಶರಣರು, ಹರಿದಾಸರು, ದಾರ್ಶನಿಕರು, ಕವಿಗಳು ಯಾವೊಂದೂ ಫಲಾಪೇಕ್ಷೇ ಇಲ್ಲದೇನೆ ಹಾಡಿ ಹೊಗಳುತ್ತಾ ನಿರ್ವ್ಯಾಜ ಪ್ರೇಮದಿಂದ ಕಂಡಂಥ ಹಾಗೂ ಜನಸಾಮಾನ್ಯರೆನಿಸಿದ ಕೋಟ್ಯಂತರ ಬಡಪಾಯಿಗಳು ತಮ್ಮ ಭವರೋಗಗಳ ನಿವಾರಣೆಗಾಗಿಯೆ ಕಂಡಂಥ ದೇವರನ್ನು ತಾವು ಕಾಣಲಾರೆವೇಕೆ ಎಂದು ಇಂಥ ಆಧುನಿಕರು ಯೋಚಿಸಲಾರರೇಕೆ? ಜನಸಾಮಾನ್ಯರ ಸಾಹಿತಿಯಾಗಿ ಎಲ್ಲರ ಮನೆ ಮಾತಾಗಿದ್ದ ಅ.ನ.ಕೃಷ್ಣರಾಯರ ನುಡಿಯೊಂದು ಹೀಗಿದೆ-
ವಿಶ್ವ ಸಿಡಿದೊಡೆಯದಂತೆ ಇನ್ನೂ ಹಿಡಿದಿಟ್ಟಿರುವುದು ಮಾನವತೆಯೊಂದೇ
ಕವಿ ಮಾನವತೆಯೆ ಪ್ರವಾದಿ.


ಅಂದರೆ, ವಿಶ್ವ ಸಿಡಿದೊಡೆದು ಛಿದ್ರವಾಗದಿರುವುದಕ್ಕೆ ಕಾರಣ ಇನ್ನೂ ಮಾನವೀಯತೆ ಉಳಿದಿರುವುದೇ ಆಗಿದೆ. (ಇಲ್ಲವೇ ಹಿರೋಷಿಮಾದಂಥ ಅಷ್ಟೇಕೆ ಅದಕ್ಕೂ ಮಿಗಿಲಾದ ಆಧುನಿಕ ತಂತ್ರಜ್ಞಾನದ ಸಹಸ್ರಾರು ಬಾಂಬುಗಳು ಒಮ್ಮೆಲೆ ಎಲ್ಲ ಕಡೆ ಬಿದ್ದಾವು).

ಕೆಲವೊಮ್ಮೆ, ಪ್ರಕೃತಿಯಿಂದಲೋ ದುಷ್ಟ ಮನುಷ್ಯರಿಂದರಲೋ ಆಗಬಾರದಂತಹ ಅನಾಹುತಗಳಿರುವುದರಿಂದಲೇ ಒಳ್ಳೆಯದಕ್ಕೇ, ಸಾತ್ವಿಕತೆಗೇ ದೈವತ್ವಕ್ಕೆ ಇನ್ನೂ ಎಲ್ಲ ಕಾಲಕ್ಕೂ ಬೆಲೆ ಇರುವುದು ಕೂಡ ಎಂಬುದನ್ನೂ ಮರೆಯಬಾರದು.
ಜಗತ್ತು ಎಂದಿಗೂ ತ್ರಿಗುಣಾತ್ಮಕ. ನನ್ನ "ಸಪ್ತಗಿರಿ ಸಂಪದ" ಪುರಾಣ ಕಥಾನಕ ನೋಡಿ.

ಹೌದು, ಈ ಮಾನವೀಯತೆಯ ಅಳತೆಗೋಲೊಂದಿದ್ದರೆ ಅದು ದೈವತ್ವವೇ. ನಮ್ಮ ಆತ್ಮಕ್ಕೆ ಪರಮಾಪ್ತವಾದದ್ದೇ ಅದು. ಯಾವುದು ನಮಗೆ ಪರಮಾಪ್ತವೋ ಅದೇ “ಪರಮಾತ್ಮ. ಆ ಪರಮಾತ್ಮನೇ ದೇವರು.” ಅಂಥಹ ದೈವತ್ವಕ್ಕೆ ನಿಷ್ಟರಾಗಿರುವುದೇ ಭಕ್ತಿ ಭಾವ. ಅಂತೆಯೆ, ದೈವತ್ವವೆಂಬುದರ ಭದ್ರ ಬುನಾದಿಯೊ ದೈವ ಭಕ್ತಿಯೆ ಆಗಿರುತ್ತದೆ. ದೇವರು, ದೈವತ್ವ, ದೈವ ಭಕ್ತಿ ಇವುಗಳಲ್ಲಿ ತಮ್ಮನ್ನು ಕಂಡು ಕೊಳ್ಳಬಲ್ಲವರೇ ದೇವರಲ್ಲಿದ್ದವರಾಗಿದ್ದಾರೆ. ಇಹದಿಂದ ಮುಕ್ತಿ ಎಂಬ ಮಹಾಸೌಧ ಕಟ್ಟ ಬಲ್ಲವರೂ ಅವರೇ ಆಗಿರುತ್ತಾರಲ್ಲ...

ಅ.ನ.ಕೃ. ಮುಂದುವರೆದು ಹೇಳುತ್ತಾರೆ-
ದೇವರು ಎಂಬ ಪರವಸ್ತುವೊಂದಿದೆ. ಅದು ಶಕ್ತಿ, ಸೌಂದರ್ಯ, ಸತ್ಯದ ಘನೀಭೂತ ಮೊರ್ತಿಯಾಗಿದೆ. ಮಾನವ ಆ ದೇವನ ಅಂಶ ಎನ್ನುವ ನಂಬಿಕೆ ಜನತೆಯಲ್ಲಿ ಹಲವು ಕಾರಣಗಳಿಂದ ಕ್ಷಯಿಸಿ ಹೋಗಿರುತ್ತದೆ. ದೇವರಿಲ್ಲ ಎಂಬ ನಾಸ್ತಿಕತನ ಒಂದೆಡೆ ತನ್ನ ಸಂದೇಶ ಬೀರಿದರೆ, ಸಹಸ್ರಾರು ದೇವತೆಗಳಿದ್ದಾರೆಂಬ ನಂಬಿಕೆ ಮತ್ತೊಂದೆಡೆ ಮನಷ್ಯ ಚೇತನವನ್ನು ಹರಿದು ಹಂಚಿ ಬಿಡುತ್ತದೆ.

ಅಂಥ ಚೇತನ ಸ್ವರೂಪಗಳ ಚಿಂತನೆಯ ವೈಶಿಷ್ಟ್ಯವೇ ಬೇರೆ. ವಿಶ್ವ ಮಾನವ ಚೇತನ ಸ್ವರೂಪರೇ ಆದ ಕುವೆಂಪುರವರ ಈ ಗೀತೆಯನ್ನೇ ನೋಡಿ,

ಓ ನನ್ನ ಚೇತನ ಆಗು ನೀ ಅನಿಕೇತನ....
ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯೆ ಬಿರಿಯೆ ಭಾವ ದೀಟಿ
ಓ ನನ್ನ ಚೇತನ ಆಗು ನೀ ಅನಿಕೇತನ.

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ದಿಗ್ ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ...

ರಸ ಋಷಿ ಕುವೆಂಪು ತಮ್ಮ ಆತ್ಮನಲ್ಲೇ ಆ ದಿವ್ಯ ಚೇತನ ಸ್ವರೂಪವನ್ನು ಕಂಡಿದ್ದಾರೆ; ನೂರು ಮತಗಳನ್ನು ಹೊಟ್ಟಿನಂತೆ ತೂರಿ ಎಲ್ಲ ತತ್ವದ ಎಲ್ಲೆ ಮೀರಿ ಇಂದಿಗೂ ದಿಗ್ ದಿಗಂತವಾಗಿ ಏರಿ ನಮ್ಮ ನಡುವೆ ಅಮರ ಸಂದೇಶ ಬೀರಿ ಅಮರರಾಗಿದ್ದಾರಲ್ಲವೇ..
ಕುವೆಂಪುರವರ ಚೇತನ ಸ್ವರೂಪವು ಆತ್ಮ-ಪರಮಾತ್ಮನ ಶೋಧನೆಯನ್ನೇ ಮಾಡಿದೆ.
ಓ ಅನಂತವಾಗಿರು.. ಎಂದು ಅನಂತದಲ್ಲೇ ಲೀನವಾಗಿದೆಯಲ್ಲ.

ಹನ್ನೆರಡನೇ ಶತಮಾನದಲ್ಲೇ ಆಗಿ ಹೋದ ಶರಣರಾದ ದಾರ್ಶನಿಕ ಬಸವಣ್ಣನವರು- ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಲಿ ಬಡವನಯ್ಯ ಎನ್ನ ಕಾಲೇ ಕಂಭ ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯ ಕೂಡಲ ಸಂಗಮ ದೇವ ಕೇಳಯ್ಯ|

ಬಸವಣ್ಣನವರು ತಮ್ಮ ಕಾಯದಲ್ಲೇ ಶಿವಾಲಯ ಕಾಣುವ ಶರಣರಾಗಿ ತಮಗೆ ಪರಮಾಪ್ತವಾದ ಆತ್ಮನಲ್ಲೇ ಪರಮಾತ್ಮನನ್ನು ಅಂದರೆ ದೇವರನ್ನು ಕಂಡವರಾಗಿ ಆ ಚೇತನ ಸ್ವರೂಪದಲ್ಲೇ ದೇವರಲ್ಲಿದ್ದವರಾಗಿ ತಾವು ಕೂಡ ಹುಟ್ಟಿ ಬೆಳೆದ ಜಾತಿ ಮತಗಳನ್ನು ಹೊಟ್ಟಿನಂತೆ ತೂರಿ ಒಗೆದೇ ಗೆದ್ದಿದ್ದಾರೆ.
ಈ ಇಪ್ಪತ್ತೊಂದನೇ ಶತಮಾನದ ಕೆಲ ವಿದ್ವಾಂಸರುಗಳಿಗೆ ಮಾತ್ರ ಕಳೆದ ಎಂಟು ಶತಮಾನಗಳಲ್ಲಿ ಯಾರೂ ಕಂಡರಿಯಲು ಹೋಗದ ಗಂಭೀರವಾಗಿ ಪರಿಗಣಿಸದಂತಹ ಬಸವಣ್ಣನವರ ಜಾತಿ, ಹುಟ್ಟು, ಕುಲ- ಗೋತ್ರಗಳೇ ಆ ಮಹಾನುಭಾವರ ದಾರ್ಶನಿಕತೆಯುಳ್ಳ ಶ್ರೇಷ್ಠ ಕೃತಿ ವಚನಗಳಿಂತ ಅವೇ ಅಧ್ಯಯನದ ಮೊಲ ಆಕರ ಹಾಗೂ ಆಧಾರ ಸ್ತಂಭವಾಗಿರುವುದೇ ಶೋಚನೀಯವೆನಿಸಿದೆ. ಯಾವೊಂದು ಆತ್ಮಶೋಧನೆಗಿಂತ ಇಂತಹ ಜಾತಿ ಹುಟ್ಟು ಕುಲ ಗೋತ್ರಗಳಶೋಧನೆಯೇ ಅವರ ಸಂಶೋಧನಾತ್ಮಕ ಪ್ರಬಂಧಗಳ ವೈಶಿಷ್ಟ್ಯವೆನಿಸಿದೆ, ಅಂತಹ ಬರವಣಿಗೆಯಿಂದಲೇ ತಾವೂ “ವಿಜೃಂಭಿಸಿ’’ ಮೆರೆದು ಹಣ ಮಾಡಿಕೊಳ್ಳುವ ಹುನ್ನಾರವೇ!

ಮನುಷ್ಯ ಹುಟ್ಟಿನಿಂದ ಒಂದು ಪ್ರಾಣಿಯಷ್ಟೇ. ಅವನು ಚೇತನ ಸ್ವರೂಪನಾಗಿ ಮಾನವನಾಗುವುದು. ತನಗೆ ಪರಮಾಪ್ತವಾದ ಆತ್ಮನ ಅರಿವುಮೊಡಿದಾಗ ಆ ಆತ್ಮನಲ್ಲೇ ಇರುವ ಪರಮಾತ್ಮನಿಗೆ ನಿಷ್ಠೆಯಿಂದಿದ್ದಾಗಲೆ;ದೈವತ್ವವನ್ನು ಕಾಣವುದು. ಯಾಕೆಂದರೆ, ಈಗಾಗಲೇ ನಾನು ಹೇಳಿದಂತೆ ಮಾನವತ್ವಕ್ಕೆ ಅಳತೆಗೋಲೊಂದಿದ್ದರೆ ಅದು ದೈವತ್ವವೇ ಎಂಬುದು ಸ್ಪಟಿಕದಷ್ಟು ಸ್ಪಷ್ಟವಾಗಿ ನಿಚ್ಛಳವಾಗಿರುತ್ತದೆ.

ಮೇಲ್ನೋಟಕ್ಕೆ ನಮ್ಮ ಸುತ್ತ ಮುತ್ತ ಕೆಟ್ಟದ್ದೆಂಬುದೇ ಹೆಚ್ಚು ವಿಜೃಂಭಿಸುತ್ತಿರುತ್ತದೆ. ದೇವರು ಎಲ್ಲಿದ್ದಾನೆ? ದೈವತ್ವ ಎಲ್ಲಿದೆ? ಮಾನವತೆಯೆ ಸತ್ತು ಹೋಗಿದೆ ಎನಿಸುತ್ತದೆ. ಇಲ್ಲ, ಮಾನವತೆ ಇನ್ನೂ ಸತ್ತಿಲ್ಲ ಎಂಬುದಕ್ಕೇ ನಾವಷ್ಟೋ ಉದಾಹರಣಗೆಳನ್ನು ಕಾಣುತ್ತಲೇ ಇರುತ್ತೇವೆ; ಆದರೆ, ಒಳಿತೆಂಬುದರ ಪ್ರಭಾವಕ್ಕಿಂತ ಕೆಡುಕಿನ ಸಂಗತಿಗಳೇ ಹೆಚ್ಚಾಗಿ ಕಾಣಸಿಗವುದರಿಂದ ಅಂತಹ ಒಳಿತಿನ ಪ್ರಸಂಗಗಳನ್ನೇ ಮರೆತು ಬಿಡುತ್ತೇವಲ್ಲ. ಇಲ್ಲ ಹಾಗಾಗಬಾರದು. ಯಾಕೆಂದರೆ, ಮಾನವತೆ ಸಂಪೂರ್ಣವಾಗಿ ಸತ್ತುಹೋದ ದಿನ ಇಡೀ ವಿಶ್ವದ ಸರ್ವನಾಶವಾಗಿರತ್ತದೆ! ಅದೆಂದಿಗೂ ಆಗಲಾರದೆಂಬ ನಂಬಿಕೆಯ ಮೇಲೇ ಇಡೀ ವಿಶ್ವನಿಂತಿದೆ. ಆ ನಂಬಿಕೆಯ ಹಿಂದೆ ಇರುವುದೇ ಮಾನವತೆ; ಅದರ ದೈವಿಕತೆಯಷ್ಟೇ..

ಇಂದು ನಮ್ಮ ಭಾರತ ಆಧ್ಯಾತ್ಮಿಕ ಉನ್ನತಿಯಲ್ಲಿಯೆ ಪ್ರಗತಿ ಕಾಣತೊಡಗಿದೆ. ಇಡೀ ವಿಶ್ವಕ್ಕೇ ಮಾದರಿ ಎನಿಸಿದೆ. ನಮ್ಮ ಮಹತ್ತರ ಘೋಷಣೆ ಎಂದರೆ “ಜಾತ್ಯಾತಿ ರಾಷ್ಟ್ರ” ಆದರೇನು! ವಿಪರ್ಯಾಸವೆಂದರೆ ಇಲ್ಲಿ ಜಾತಿ ರಾಜಕಾರಣವೆ ಮೇಲುಗೈ ಪಡೆದಿರುವಂತಿದೆ. ಏನೇ ಆಗಲಿ, ಈ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಇಪ್ಪತ್ತೊಂದನೇ ಶತಮಾನದಲ್ಲಿಯೊ ಕೂಡ ಅತ್ಯಂತ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ ಎಲ್ಲೆಡೆಯಲ್ಲೂ ಆಧ್ಯಾತ್ಮ ಮತ್ತು ಧ್ಯಾನವೇ ಸರ್ವರೋಗ ನಿವಾರಣಿ ಎಂದೂ ನಮ್ಮ ಭಾರತದಿಂದಲೇ ಪ್ರತಿ ಪಾದನೆಯಾಗುತ್ತಿರುವ ಸಂದರ್ಭದಲ್ಲಿ ನಮ್ಮ ಇಡೀ ಜನಾಂಗ ಹೆಮ್ಮೆಯಿಂದ ಬದುಕುತ್ತಿರುವಾಗ, ಇಲ್ಲಿ ನಮ್ಮ ನಮ್ಮೊಳಗೇ ಜಾತಿಯನ್ನು ಎತ್ತಿ ಹಿಡಿದೆಳೆದಾಡುವ ಮಹಾನ್ ಸಂಶೋಧಕರೂ ವಿದ್ವಾಂಸರೂ ಹುಟ್ಟಿಕೊಂಡಿದ್ದಾರೆ!

ಇದೆಲ್ಲ ಯಾಕಾಗಿ, ಹಣಕ್ಕಾಗಿಯೆ? ಹೌದು, ಭಾರತದಲ್ಲಿ ಹಣವೇ ಮಾತನಾಡುವುದು ಎನ್ನುವವರಿದ್ದಾರೆ. ಆದರೂ ಇಲ್ಲಿ ಭಗವಂತನೊಡನೆ ಮಾತನಾಡುವವರಿಗೇನೂ ಕಡಿಮೆ ಇಲ್ಲ. ನೀವು ಮಾತನಾಡಿದ್ದೀರಾ ಎಂದು ನೀವು ಕೇಳ ಬಹುದು. ನಾನಾಗಲೇ ಹೇಳಿದಂತೆ ನನಗೆ ಆಪ್ತನಾದ ಆತ್ಮ ಆ ಪರಮಾತ್ಮನೊಡನೆ ಮಾತನಾಡಿರಲಿಕ್ಕೂ ಸಾಕು. ಅವನ ಅರಿವಿನಿಂದಲೇ ಈ ಲೇಖನವೂ ಕೂಡ. ಆದರೂ ಆ ನನ್ನ ಅಂತರಾತ್ಮನ ಅರಿವೇನೆಂಬುದನ್ನು ಯಾವ ಶಬ್ದಗಳಲ್ಲೂ ಹಿಡಿದಿಡಲು ಖಂಡಿತ ಸಾಧ್ಯವಾಗಿಲ್ಲವೆಂದೇ ಹೇಳುತ್ತೇನೆ. ಪ್ರಾಯಶಃ ಅಂತಹ ಅಂತರಾತ್ಮನ ಅರಿವು ನಿಮಗೂ ಆಗಿರಲೂ ಬಹುದು. ಆದ್ದರಿಂದಲೇ, ಖಂಡಿತವಾಗಿ ಹೇಳ ಬಲ್ಲೆವು ನಾವು; ಭಗವಂತನಿಲ್ಲದ ಕೋಟ್ಯಂತರ ಭಾರತೀಯರ ಅಷ್ಟೇಕೆ ವಿಶ್ವದ ಜನಸ್ತೋಮದ ಬದುಕನ್ನು ನಾವೆಂದೂ ಊಹಿಸಿಕೊಳ್ಳಲಾರೆವಲ್ಲ. ಇನ್ನೂ ಹೇಳಬೇಕೆಂದರೆ, ನಮ್ಮ ಭಾರತದ ಬಡಜನತೆ ಬದುಕುವುದೇ ಭಗವಂತನ ಕೃಪೆ ತಮಗಿದೆ;ತಮಗಾಗತ್ತದೆ ಎಂಬ ಆಸೆಯೊಂದರಿಂದ; ಆ ಅಚಲ ನಂಬಿಕೆಯಿಂದ. ಅಂತೆಯೆ, ನಮ್ಮ ಭಾರತ ಅನಾದಿ ಕಾಲದಿಂದ ಭಗವಂತನಲ್ಲಿದ್ದೇ ಗೆದ್ದಿದೆ; ಆ ಬಗೆಯ ಆಧ್ಯಾತ್ಮಿಕ ಉನ್ನತಿಯನ್ನೂ ಸಾಧಿಸುತ್ತ ಗೆಲ್ಲುತ್ತಲೇ ಇದೆ ಇಂದಿಗೂ ಇಡೀ ವಿಶ್ವಕ್ಕೇ ಮಾದರಿಯೆನಿಸಿದೆ. ಅದೇ ಜಾತಿ ಬೇಧಗಳಿಂದಲ್ಲ; ಅಂತಹ ವಿವಾದಗಳನ್ನು ಹುಟ್ಟು ಹಾಕುವಂತಹ ನಿಷ್ಪ್ರಯೋಜಕ ಸಂಶೋಧನೆಗಳಿಂದಂತೂ ಅಲ್ಲವೇ ಅಲ್ಲ.