Monday, April 14, 2008

ಮನುಷ್ಯರಿಗಿಂತ ದೇವರಲ್ಲಿ ಹೇಳಿಕೊಳ್ಳಬಹುದು...

ನಮ್ಮ ಕಷ್ಟ-ಸುಖ ದೇವರಲ್ಲಿ ಹೇಳಿಕೊಳ್ಳಬಹುದು. ಮನುಷ್ಯರಲ್ಲಿ ಹೇಳಿಕೊಳ್ಳೋದಿದೆಯಲ್ಲ; ಅದೂ ಕಷ್ಟವೇ ಸರಿ. ನಮ್ಮ ಸುಖ ನಾವು ಹೇಳಿಕೊಳ್ಳೋದು ಸರಿಕಾಣದು. ಕೇಳಿದರೆ ಪರವಾಗಿಲ್ಲ ಚೆನ್ನಾಗಿದ್ದೀವೆ ಎನ್ನುತ್ತೇವೆ. ನಾವು ಹೇಳಿಕೊಳ್ಳದಿದ್ದರೂ ಕಂಡು ಕರುಬುವವರಿಗೇನೂ ಕಡಿಮೆ ಇಲ್ಲ.  ಕಷ್ಟ ಅಂತೂ ಬಿಡಿ, ಹೇಳಿಕೊಂಡರೆ ಮೆಲ್ಲನೆ ಹಿಂದೆ ಸರಿವವರೇ ಇದಾರೆ.  ಹಾಗೇನಾದರೂ ಸಂಕಷ್ಟ ಕೇಳಿದರೆ ಆ ಸಂದರ್ಭದಲ್ಲಿ ಅವರೇ ದೇವರಾಗಿರುತ್ತಾರೆ;ಅಲ್ಲವೇ?  ಹೌದು, ಸರಿ ಸರಿಯಾಗಿ ಬದುಕುತ್ತಿದ್ದರೆ ಪರಿಪರಿಯಾದ ನೆಂಟರು! ಇಲ್ಲದಿದ್ದರೆ, ಇವನದೇನಪ್ಪ ಇದ್ದದ್ದೇ ಪಿರಿ ಪಿರಿ ಅನ್ತಾರೆ.
ಬಡವರ ಕಷ್ಟ ಅರ್ಥವಾಗುವಂಥ ಉಳ್ಳವರು ವಿರಳ. ಅದಕ್ಕೇ ಹೇಳೋದು "ಬಡವರ ಕಷ್ಟ ಭಗವಂತನಿಗೇ ಗೊತ್ತು" ಅಂತ.  ದುಷ್ಟರಿಗಂತೂ ಅರ್ಥವಾಗೋದೇ ಇಲ್ಲ ಬಿಡಿ. ಈ ಭಾರತ ದೇಶ ಬಡಬಗ್ಗರ ದೇಶ. ನಮ್ಮ ಬಡ ಜನತೆ ಭಗವಂತನಲ್ಲಿಟ್ಟಿರವ ನಂಬಿಕೆ ವಿಶ್ವಾಸ ವಿದೇಶೀಯರನ್ನೂ ಮೂಕ ವಿಸ್ಮಿತರನ್ನಾಗಿಸಿದೆ.
ನಮ್ಮ ಪುಢಾರಿಗಳಿಗಂತೂ ಬಡವರು ಬಡವರಾಗಿರಬೇಕು; ಬುದ್ಧಿಗೂ ಅವರಿಗೆ ದಾರಿದ್ರ್ಯವಿರಬೇಕು ಆಗಲೇ ಅವರ ಬೇಳೆ ಬೇಯೋದು ಎಂಬೋದು ಅವರ ಚುನಾವಣೆಯ ಕಾಲದಲ್ಲಿ ಗೊತ್ತಾಗದೇ ಇರದಲ್ಲ!  ಬರೇ ಬಡವರ ಕಣ್ಣೀರೊರೆಸುವ ನಾಟಕ! ಅದಕ್ಕೇ ಕರವಸ್ತ್ರ ಕೊಟ್ಟ ಹಾಗೆಯೇ ಒಂದಿಇಷ್ಟು ಹಾಕಿಯೊ ತಮ್ಮ ಸ್ವಾರ್ಥ ಸಾಧನೆ ಮಾಡ್ಕೋತಾರೆ ಇಂಥ "ದೊಡ್ಡ ಮನುಷ್ಯರು"  ಆದರೆ, ನಮ್ಮ ಬಡ ಜನತೆ ಈಗೀಗ ಬುದ್ಧಿವಂತರಾಗ್ತಿದಾರೆ. ಅವರಿಗೊತ್ತು ಇಂಥ ನಯವಂಚಕರಿಗೆಲ್ಲ ಚಳ್ಳೇ ಹಣ್ಣು ತಿನ್ಸೋದು ಹೇಗೆಂತ?
ಅಷ್ಟಕ್ಯೂ ಮನುಷ್ಯ ಕಷ್ಟಪಟ್ಟೇ ಜೀವನದಲ್ಲಿ ಮುಂದೆ ಬರಬೇಕೆಂದೂ ಹೇಳುತ್ತಾರೆ; ಈ ನಮ್ಮ ಜನ. ಅಂಥ ಕಷ್ಟ ಸಹಿಷ್ಣುಗಳು!  ಜೊತೆಗೆ ಭಗವಂತನಲ್ಲಿ ನಂಬಿಕೆ ಇರಬೇಕು ಅಂತಾರೆ. ಅವನಲ್ಲಿ ನಂಬಿಕೆ ಇಟ್ಟು ಆಶ್ಚರ್ಯಕರ ರೀತಿಯಲ್ಲಿ ತಮ್ಮ ಸಂಕಟಗಳಿಂದ ಪಾರಾದವರಿದ್ದಾರೆ. ಅಂಥ ನಿಶ್ಚಲ ನಂಬಿಕೆಯಿಂದಲೇ ಈ ಭವದ ಬದುಕು ನಡೆಯುವುದೂ ಕೂಡ. ಇಲ್ಲವಾದರೆ, ಈ ಪಾಟಿ ಜನಸಂಖ್ಯೆ ಹೆಚ್ಚುತ್ತಿರಲಿಲ್ಲ. ಯಾಕಂದರೆ, ಎಂಥ ಕೆಟ್ಟ ಕಾಯಿಲೆ ಬಂದ್ರೂ (ಕಾಯಿಲೆಯಂಥ ಮಹಾ ಶತ್ರು ಬೇರೇನಿಲ್ಲ) ಬದುಕುವ ಛಲ ಬಿಡದೇ ಎಲ್ಲಿಂದಲಾದ್ರೂ ದುಡ್ಡು ಹೊಂದಿಸಿ ನರ್ಸಿಂಗ್ ಹೋಂಗಳಿಗೂ ದುಡ್ಡು ಸುರಿಯೋ ಬಡವರು ಇರುತ್ತಿರಲಿಲ್ಲ; ಖಂಡಿತ ಬದುಕುವುದಕ್ಕೇ ಇಷ್ಟಪಡುತ್ತಿರಲಿಲ್ಲ.
ಅದಕ್ಕೇ ಹೇಳ್ತಾರೆ: ಭಗವಂತನಲ್ಲಿ ನಂಬಿಕೆ ಇರಬೇಕು. ಅವನ ದಯೆಯೊಂದಿದ್ದರೆ ಸಾಕು, ಯಾರಾದರೂ ಪುಣ್ಯಾತ್ಮರು ಸಹಾಯಕ್ಕೆ ಬಂದೇ ಬರ್ತಾರೆ ಎಂಬುದೇ ಅಚಲ ನಂಬಿಕೆ. ಹಣದಿಂದಲೇ ಎಲ್ಲವೂ ಆಗೋದಿಲ್ಲ ಎಂಬ ಅನುಭವ ಉಳ್ಳವರಿಗೂ ಉಂಟಲ್ಲ!  
ಮನುಷ್ಯ ಕಷ್ಟಪಟ್ಟೇ ಮುಂದೆ ಬರಬೇಕೆಂದೂ ಹೇಳುತ್ತಾರೆ. ಇಲ್ಲ ಕಷ್ಟಾಂದ್ರೇ ಏನೂಂತ ಸುತ್ತಮುತ್ತ ನೋಡಿಯಾದರೂ ತಿಳಕೊಂಡಿರಬೇಕು. ಆಗ ಮಾತ್ರ ನರ ಹರನಾಗಲು ಸಾಧ್ಯವಾದೀತು. ಆತನಿಗೆ ನೆರವಾಗಲು ಮನಸ್ಸಾದೀತು!
ಯಾವ ಮಹತ್ಕಾರ್ಯವೂ ಹೃದಯವನ್ನೇ ತೆರೆದಿಡದೇ, ಕಿಂಚಿತ್ ತ್ಯಾಗವಿಲ್ಲದೇನೆ ಆಗಲಾರದು. ಯಾವಾಗಲೂ ನೈಜ ಸಾಧಕರ ಹಿಂದೆ ಕಷ್ಟಗಳ ಪರಂಪರೆಯೇ.  ಅದನ್ನೆಲ್ಲ ದಾಟಿಯೇ ತಮ್ಮ ಅನುಭವದ ತೇಜಿಯಲ್ಲಿ ಅನುಭಾವದ ಮೊಟೆ ಹೊತ್ತೇ ಬಂದಿರುತ್ತಾರವರು. ಅವರ ಅಸ್ಖಲಿತ ನುಡಿಗಳು, ಅಚಲ ವಿಶ್ವಾಸಗಳು ಎಂದಿಗೂ ತೇಜೋಮಯ. ಅವನ್ನು ಅಳಿಸಿಬಿಡುವೆವೆಂದು ದುಷ್ಟಶಕ್ತಿಗಳು ಯತ್ನಿಸಿದರೂ ಅವೆಂದಿಗೂ ದೈವಿಕವಾಗಿ ವಿಝ್ರಂಭಿಸಿಯೆ ತೀರುವುವು. ಇಲ್ಲದಿದ್ದರೆ ಮತ್ತೊಂದು ಬೆಳಗಿನೆಡೆಗೆ ಮನುಷ್ಯನ ಆಶಯ ಮತ್ತು ಆಸಕ್ತಿಗಳು ಇರುತ್ತಲೇ ಇರಲಿಲ್ಲ!

No comments: