Wednesday, July 18, 2007

ಶೂನ್ಯ ಸಾನ್ನಿಧ್ಯ-ಪೀಠಿಕೆ

ಶ್ರೀ ವೆಂಕಟೇಶ ಪುರಾಣ ಕಥೆಯನ್ನು ಅಭ್ಯಸಿಸಿ ಸಮಕಾಲೀನ ಜೀವನ ಮೌಲ್ಯಗಳನ್ನು ಗುರುತಿಸುವ ಪ್ರಯತ್ನದ ಮಾಡಿದನಂತರ, ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳ ಬಗ್ಗೆ ಒಂದಿಷ್ಟು ಅವಲೋಕನ ಮಾಡುವ ಮತ್ತು ಅವುಗಳನ್ನು ಆಧರಿಸಿ ನನ್ನದೇ ಚಿಂತನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಹಂಬಲ ತೀವ್ರವಾಯಿತು. ಅದರ ಫಲವಾಗಿ ಮೊಡಿಬಂದ ಕೃತಿಯೆ “ಶೂನ್ಯ ಸಾನ್ನಿಧ್ಯ.”

ತಾತ್ವಿಕತೆಯ ಒರೆಗಲ್ಲಿನ ಮೇಲೇ ಜೀವನ ಸಿದ್ಧಾಂತಗಳು. ಅವುಗಳನ್ನು ಆಧುನಿಕ ದೃಷ್ಟಿಕೋನದಲ್ಲಿರಿಸಿ ನೋಡಿದಷ್ಟೂ ಹೊಸ ವಿಚಾರ ಧಾರೆಗಳು; ಜೀವನ ಮೌಲ್ಯಗಳೂ ಕೂಡ. ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದವರು ನಾವು ನಮ್ಮ ಆಧ್ಯಾತ್ಮಿಕ ಪ್ರಪಂಚದಲ್ಲಿ ಆಗಿ ಹೋದ ಮಹಾನ್ ದಾರ್ಶನಿಕರು ಅನೇಕಾನೇಕ. ಇಂದಿಗೂ ಅವರ ಅನುಯಾಯಿಗಳೂ ವಿಶ್ವದಾದ್ಯಂತ ಪಸರಿಸಿದ್ದಾರೆ;. ನಮ್ಮ ಸಂಸ್ಕೃತಿ ಪರಂಪರೆಯ ವೈಶಿಷ್ಟ್ಯವನ್ನು ಅವುಗಳಲ್ಲಿರುವ ತಾತ್ವಿಕತೆಯ ಸಾರ ಸತ್ವವನ್ನು ಪ್ರಚುರ ಪಡಿಸುತ್ತಲೇ ಬಂದಿದ್ದಾರೆ. ಹೀಗೆ ವೇದ ಕಾಲದಿಂದಲೂ ನಮ್ಮ ಭಾರತ ವಿಶ್ವ ನಾಗರಿಕತೆಗೆ ಹೆಮ್ಮೆ ಪಡುವಂತಹ ಮಹಾತ್ಕಾರ್ಯವನ್ನು ಮಾಡುತ್ತಲೇ ಬಂದಿದೆ. ಆಗಿ ಹೋದ ಸಂತರು, ಮಹಂತರು, ಬಸವಾದಿ ಶರಣರು, ದಾಸವರೇಣ್ಯರು ನೀಡಿದ ಕೊಡುಗೆಗಳೂ ಅಪಾರ. ಅವು ನಮ್ಮ ನವ ಸಮಾಜ ನಿರ್ಮಾಣಕ್ಕೆ ಕನ್ನಡಿ ಹಿಡಿದಿವೆ.

ತಾತ್ವಿಕ ವಿಚಾರಗಳೆಂದರೆ ಭಕ್ತಿ ರಸವಷ್ಟೇ, ವಯೋವೃದ್ಧರಿಗೆ ಮೀಸಲಷ್ಟೇ ಎನ್ನುವ ಆಧುನಿಕ ಯುವ ಜನಾಂಗದ ಕಣ್ತೆರೆಸುವಂತಿವೆ; ಅವುಗಳಿಂದಲೇ ಉದಿಸಿ ಬಂದಿರುವ ನವ ನವೀನ ಮೌಲ್ಯಗಳು. ಅವುಗಳನ್ನು ಸ್ವೀಕರಿಸಲು ಸಹೃದಯತೆಯೊಂದಿರಬೇಕಷ್ಟೇ.

ತಾತ್ವಿಕತೆಯ ಆಳ-ಅಗಲ ತಿಳಿದವರಿಲ್ಲ. ಮಹಾನ್ ಸಂತರ,ಶರಣರ,ದಾರ್ಶನಿಕರ ಅಂತರಾಳ ಅರಿಯುವುದೂ ಸುಲಭವೇನಲ್ಲ. ಅವರ ತಾತ್ವಿಕ ನುಡಿಗಟ್ಟುಗಳು,ವಚನಗಳು, ಪದಗಳು, ಲೋಕೋಪಯೋಗಿ ಉಪಮಾನ ಉಪಮೇಯಗಳು ವಿಪುಲವಾಗಿವೆ. ಅವುಗಳನ್ನು ಒರೆಗೆ ಹಚ್ಚುವುದೂ ಇಂದಿನ ಜನಜೀವನಕ್ಕೆ ಅನ್ವಯವೇ ಆದರೂ ಹೊಸ ದೃಷ್ಟಿಕೋನದಲ್ಲಿಟ್ಟು ಕೂಲಂಕಷವಾಗಿ ಸಾದರ ಪಡಿಸುವುದೂ ಗುರುತರ ಕಾರ್ಯವೇ ಸರಿ. ತಿಳಿದವರಿಗೆ ಶರಣು ಶರಣೆಂಬೆ. ಇಲ್ಲಿ ತಿಳಿಯ ಬಯಸುವವರ ಜೊತೆ ನಾನೂ ನಡೆದಿರುವೆನಷ್ಟೇ. ಮಾನವರಾಗಿ ನಾವು ಬದುಕಿ ಬಾಳಲೆಂದೇ ಸಿರಿ ನುಡಿಗಳ ನೀಡಿದ ಮಹಾನ್ ಚೇತನಗಳಿಗೆ ಕೈಮುಗಿಯೋಣ. ಆವರ ಹೃದಯ ದೀಪ್ತಿಯಲ್ಲಿ ನಾವೂ ಸಹೃದಯರಾಗಿ ಒಳಗೊಂಡು ಅವಲೋಕಿಸೋಣ. ಇಂದಿನ ಜೀವನದ ವೇಗಗತಿಯನ್ನೂ ಮತ್ತು ಒತ್ತಡವನ್ನೂ ಹಿಂದೆ ಹಾಕಿ ಮುಂದೆ ಸಾಗುವಂತಹ ದೈಹಿಕ -ಮಾನಸಿಕ ಸೌಖ್ಯ ಮತ್ತು ಸ್ವಾಂತನದ ರಹಸ್ಯ ಕಾಣಲು ನನ್ನೊಡನೆ ನೀವೂ ಒಳಗೊಂಡು ಬನ್ನಿ. ಇದು ಕೇವಲ ದೃಶ್ಯ ಮಾಧ್ಯಮದ ಸೆಳೆ ಮಿಂಚಲ್ಲ! ನಮ್ಮ ದಿವ್ಯ ಚೇತನವನ್ನು ಅಂತರಂಗದ ಶೂನ್ಯ ಸಾನ್ನಿಧ್ಯದಲ್ಲಿ ಪರಿಚಯ ಮಾಡಿಸುವಂಥ ಅನುಭಾವಿಗಳ ಕೃಪಾಶೀರ್ವಾದದ ನೆರಳಲ್ಲಿ ಮೊಡಿ ಬಂದ ವಿಚಾರ ಧಾರೆಗಳು.
ಗುರುವಾರ 19-07-2007

No comments: